ಕೃಷ್ಣರಾಜಪುರ: ಈ ವ್ಯಾಪ್ತಿಯ ಬಹುತೇಕ ಬಡಾವಣೆಗಳಲ್ಲಿ ಬೆಂಗಳೂರು ಜಲಮಂಡಳಿ ಸಿಬ್ಬಂದಿ ಕುಡಿಯುವ ನೀರು ಪೂರೈಕೆ ಹಾಗೂ ಒಳಚರಂಡಿಗೆ ತುರ್ತು ಕೊಳವೆ ಅಳವಡಿಸಲು ಅವೈಜ್ಞಾನಿಕ ರೀತಿಯಲ್ಲಿ ರಸ್ತೆಯನ್ನು ಮಧ್ಯಭಾಗದಲ್ಲಿ ಮನಸೋ ಇಚ್ಛೆ ಅಗೆಯುತ್ತಿದ್ದಾರೆ ಎಂದು ಸ್ಥಳೀಯ ನಿವಾಸಿಗಳು ದೂರಿದ್ದಾರೆ.
ಕೋಟ್ಯಂತರ ರೂಪಾಯಿ ವೆಚ್ಚದಲ್ಲಿ ರಸ್ತೆ ವಿಸ್ತರಣೆ ಜತೆಗೆ ಡಾಂಬರೀಕರಣ ಕಾಮಗಾರಿ ಬಹುತೇಕ ಕಡೆ ಈಗಾಗಲೇ ಪೂರ್ಣಗೊಂಡಿದೆ. ವಾಹನಗಳ ಸುಗಮ ಸಂಚಾರಕ್ಕೂ ಯೋಗ್ಯವಾಗಿದೆ. ಆದರೆ, ಜಲಮಂಡಳಿಯು ರಸ್ತೆ ಅಗೆದಿರುವುದರಿಂದ ಅವ್ಯವಸ್ಥೆ ಉಂಟಾಗಿದೆ ಎಂದು ನಾಗರಿಕರು ಆರೋಪಿಸಿದ್ದಾರೆ.
`ಜಲಮಂಡಳಿ ಅಗೆದ ಭಾಗಗಳನ್ನು ಸರಿಯಾಗಿ ಮುಚ್ಚುವುದಿಲ್ಲ. ಮಳೆ ಬಂದಾಗ ನೀರು ನಿಂತು ಗುಂಡಿಗಳಾಗುತ್ತವೆ. ಇಡೀ ಬಡಾವಣೆಯ ರಸ್ತೆಗಳು ಹದಗೆಡುತ್ತಿವೆ~ ಎಂದು ಸ್ಥಳೀಯ ನಿವಾಸಿ ಕೃಷ್ಣಯ್ಯ ಬೇಸರ ವ್ಯಕ್ತಪಡಿಸಿದರು.
`ರಸ್ತೆ ದುರಸ್ತಿಗೆ ಮೊದಲು ಕೊಳವೆ ಅಳವಡಿಸುವಂತೆ ಬಿಬಿಎಂಪಿ ಸದಸ್ಯರಿಗೆ ಮನವಿ ಮಾಡಿದ್ದೂ ಆಗಿದೆ. ಆದರೆ, ದುರಸ್ತಿಗೊಳಗಾದ ರಸ್ತೆಗೆ ಒಳಚರಂಡಿ ಕೊಳವೆ ಅಳವಡಿಸುವ ಕಾಮಗಾರಿ ಮುಂದುವರಿಯುತ್ತಲೇ ಇದೆ. ಈ ಅವ್ಯವಸ್ಥೆ ಸಾರ್ವಜನಿಕರನ್ನು ಸಂಕಷ್ಟಕ್ಕೀಡು ಮಾಡಿದೆ~ ಎಂದು ಸಾಮಾಜಿಕ ಕಾರ್ಯಕರ್ತ ಮುರಳಿ ಅಳಲು ತೋಡಿಕೊಂಡರು.