ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೆಎಂಎಫ್‌ಗೆ ಐಎಎಸ್ ಅಧಿಕಾರಿ

Last Updated 16 ಅಕ್ಟೋಬರ್ 2012, 19:30 IST
ಅಕ್ಷರ ಗಾತ್ರ

ಬೆಂಗಳೂರು: ವಿವಾದಕ್ಕೆ ಗ್ರಾಸವಾಗಿದ್ದ ಕರ್ನಾಟಕ ಹಾಲು ಮಹಾಮಂಡಲಕ್ಕೆ (ಕೆಎಂಎಫ್) ರಾಜ್ಯ ಸರ್ಕಾರ ಕೊನೆಗೂ ಐಎಎಸ್ ಅಧಿಕಾರಿಯನ್ನು ವ್ಯವಸ್ಥಾಪಕ ನಿರ್ದೇಶಕರಾಗಿ (ಎಂ.ಡಿ) ನೇಮಕ ಮಾಡಿದೆ.

ಕರ್ನಾಟಕ ನಗರ ಮೂಲಸೌಲಭ್ಯ ಅಭಿವೃದ್ಧಿ ಮತ್ತು ಹಣಕಾಸು ನಿಗಮದ ವ್ಯವಸ್ಥಾಪಕ ನಿರ್ದೇಶಕರಾಗಿರುವ ಹರ್ಷ ಗುಪ್ತ ಅವರಿಗೆ ಕೆಎಂಎಫ್‌ನ ಎಂ.ಡಿ ಹುದ್ದೆಯನ್ನು ಹೆಚ್ಚುವರಿಯಾಗಿ ನೀಡಲಾಗಿದೆ.

ಕೆಎಂಎಫ್‌ಗೆ 1995ರ ಬಳಿಕ 2ನೇ ಬಾರಿಗೆ ಐಎಎಸ್ ಅಧಿಕಾರಿಯನ್ನು ನೇಮಿಸಲಾಗಿದೆ. 2002ರಲ್ಲಿ ಒಂದು ತಿಂಗಳ ಮಟ್ಟಿಗೆ ಐಎಎಸ್ ಅಧಿಕಾರಿಯನ್ನು ಎಂ.ಡಿ. ಹುದ್ದೆಗೆ ನೇಮಿಸಲಾಗಿತ್ತು. ಉಳಿದಂತೆ ಕೆಎಂಎಫ್‌ನ ಹಿರಿಯ ಅಧಿಕಾರಿಗಳೇ ವ್ಯವಸ್ಥಾಪಕ ನಿರ್ದೇಶಕರಾಗಿ ಕಾರ್ಯ ನಿರ್ವಹಿಸ್ದ್ದಿದರು.

ವ್ಯವಸ್ಥಾಪಕ ನಿರ್ದೇಶಕರು ಪದೇ ಪದೇ ಬದಲಾವಣೆ ಆಗುತ್ತಿದ್ದ ಹಿನ್ನೆಲೆಯಲ್ಲಿ ಕೆಎಂಎಫ್ ಆಡಳಿತ ಮಂಡಳಿಯೇ (ಅಧ್ಯಕ್ಷ ಜಿ.ಸೋಮಶೇಖರ ರೆಡ್ಡಿ ಅನುಪಸ್ಥಿತಿಯಲ್ಲಿ) ಮುಖ್ಯಮಂತ್ರಿಯವರಿಗೆ ಇತ್ತೀಚೆಗೆ ಪತ್ರ ಬರೆದು ಐಎಎಸ್ ಅಧಿಕಾರಿಯನ್ನು ನೇಮಿಸುವಂತೆ ಮನವಿ ಮಾಡಿತ್ತು.

ಜೈಲಿನಿಂದ ಜಾಮೀನಿನ ಮೇಲೆ ಬಿಡುಗಡೆಯಾಗಿರುವ ಸೋಮಶೇಖರ ರೆಡ್ಡಿ ಇತ್ತೀಚೆಗೆ ಎ.ಎಸ್.ಪ್ರೇಮನಾಥ್ ಅವರನ್ನು ಎಂ.ಡಿ ಹುದ್ದೆಯಿಂದ ವರ್ಗಾವಣೆ ಮಾಡಿ, ಅವರ ಜಾಗಕ್ಕೆ ಲಕ್ಷ್ಮಣ ರೆಡ್ಡಿ ಅವರನ್ನು ನೇಮಿಸಿದ್ದರು. ಇದು ಕೂಡ ವಿವಾದಕ್ಕೆ ಕಾರಣವಾಗಿತ್ತು.

ತಡೆಯಾಜ್ಞೆ: ಈ ನಡುವೆ ಕೆಎಂಎಫ್‌ನ ಎಂ.ಡಿ ಆಗಿ ಲಕ್ಷ್ಮಣ ರೆಡ್ಡಿ ಅವರನ್ನು ನೇಮಕ ಮಾಡಿ ಹೊರಡಿಸಿದ್ದ ಆದೇಶಕ್ಕೆ ಸಹಕಾರ ಸಂಘಗಳ ಹೆಚ್ಚುವರಿ ರಿಜಿಸ್ಟ್ರಾರ್ ಯದುನಾಥ್ ತಡೆಯಾಜ್ಞೆ ನೀಡಿದ್ದಾರೆ. ತಮ್ಮನ್ನು ಆ ಹುದ್ದೆಯಿಂದ ತೆರವುಗೊಳಿಸಿದ್ದು ಕಾನೂನುಬಾಹಿರ ಎಂದು ಆಕ್ಷೇಪಿಸಿ ನಿರ್ಗಮಿತ ಎಂ.ಡಿ. ಪ್ರೇಮನಾಥ್ ಅವರು ದೂರು ನೀಡಿದ್ದರು.

ಆಡಳಿತ ಮಂಡಳಿ ಸಭೆ: ಕೆಎಂಎಫ್ ಆಡ ಳಿತ ಮಂಡಳಿಯ ಸಭೆ ಬುಧವಾರ ನಡೆಯಲಿದೆ. ಇದರಲ್ಲಿ ಎಂ.ಡಿ ಆಗಿ ಹರ್ಷ ಗುಪ್ತ ಭಾಗವಹಿಸಲಿದ್ದಾರೆ. ಅವರು ಬುಧವಾರ ಬೆಳಿಗ್ಗೆ ಅಧಿಕಾರ ವಹಿಸಿಕೊಳ್ಳಲಿದ್ದಾರೆ.
ಜಾಧವ್‌ಗೆ ಪ್ರವಾಸೋದ್ಯಮ

ಬೆಂಗಳೂರು: ಕರ್ನಾಟಕ ನಗರ ಮೂಲಸೌಲಭ್ಯ ಅಭಿವೃದ್ಧಿ ಮತ್ತು ಹಣಕಾಸು ನಿಗಮದ ಅಧ್ಯಕ್ಷರೂ ಆದ ಹಿರಿಯ ಐಎಎಸ್ ಅಧಿಕಾರಿ ಅರವಿಂದ ಜಾಧವ್ ಅವರಿಗೆ ಹೆಚ್ಚುವರಿಯಾಗಿ ಪ್ರವಾಸೋದ್ಯಮ ಇಲಾಖೆಯ ಜವಾಬ್ದಾರಿ ವಹಿಸಲಾಗಿದೆ. ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ದರ್ಜೆಯ ಅಧಿಕಾರಿಯಾದ ಕಾರಣ ಅವರು ಅದೇ ಹುದ್ದೆಯಲ್ಲಿ ಪ್ರವಾಸೋದ್ಯಮ ಇಲಾಖೆ ನೇತೃತ್ವ ವಹಿಸಲಿದ್ದಾರೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT