ಬೆಂಗಳೂರು: ಕರ್ನಾಟಕ ಆಡಳಿತ ನ್ಯಾಯಮಂಡಳಿ (ಕೆ.ಎ.ಟಿ) ಕಚೇರಿಯನ್ನು ಇಂದಿರಾ ನಗರದಲ್ಲಿರುವ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ (ಬಿ.ಡಿ.ಎ) ಕಟ್ಟಡದಿಂದ ಕೆಂಪೇಗೌಡ ರಸ್ತೆಯಲ್ಲಿರುವ ಕಂದಾಯ ಭವನಕ್ಕೆ ಸ್ಥಳಾಂತರ ಮಾಡಲು ಸಿದ್ಧವಿರುವುದಾಗಿ ಸರ್ಕಾರ ಹೈಕೋರ್ಟ್ಗೆ ಹೇಳಿಕೆ ಸಲ್ಲಿಸಿದೆ.
ಕೆಎಟಿ ಕಚೇರಿಯನ್ನು ಇಂದಿರಾ ನಗರದಿಂದ ಕಂದಾಯ ಭವನಕ್ಕೆ ಸ್ಥಳಾಂತರ ಮಾಡುವಂತೆ ಸರ್ಕಾರಕ್ಕೆ ನಿರ್ದೇಶನ ನೀಡಬೇಕು ಎಂದು ಕೋರಿ ವಕೀಲ ಎನ್.ಪಿ. ಅಮೃತೇಶ ಅವರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಡಿ.ಎಚ್. ವಘೇಲಾ ನೇತೃತ್ವದ ವಿಭಾಗೀಯ ಪೀಠಕ್ಕೆ, ಸರ್ಕಾರ ಸೋಮವಾರ ಈ ಹೇಳಿಕೆ ಸಲ್ಲಿಸಿದೆ.
ಸರ್ಕಾರದ ಪರ ಹಾಜರಾದ ಅಡ್ವೊಕೇಟ್ ಜನರಲ್ ಎಸ್. ವಿಜಯ ಶಂಕರ್, `ಸ್ಥಳಾಂತರಕ್ಕೆ ನಾವು ಸಿದ್ಧ. ಆದರೆ, ಕೆಎಟಿ ಕಚೇರಿಗೆ ಕಂದಾಯ ಭವನದಲ್ಲಿ ಹೆಚ್ಚಿನ ಸ್ಥಳಾವಕಾಶ ಕಲ್ಪಿಸುವ ಕುರಿತು ಪ್ರಯತ್ನಿಸುತ್ತಿದ್ದೇವೆ' ಎಂದು ತಿಳಿಸಿದರು.
ಕೆಎಟಿ ಕಚೇರಿಯನ್ನು ಕಂದಾಯ ಭವನಕ್ಕೆ ಸ್ಥಳಾಂತರ ಮಾಡುವ ದಿನಾಂಕವನ್ನು ಹೈಕೋರ್ಟ್ನ ಬೇಸಿಗೆ ರಜೆಯ ನಂತರ ತಿಳಿಸಲು ನಿರ್ದೇಶನ ನೀಡಿದ ನ್ಯಾಯಪೀಠ, ವಿಚಾರಣೆಯನ್ನು ಜೂನ್ 4ಕ್ಕೆ ಮುಂದೂಡಿತು.