ಬೆಂಗಳೂರು: `ದ್ವಿತೀಯ ಮತ್ತು ತೃತೀಯ ಶ್ರೇಣಿ ನಗರಗಳಲ್ಲಿರುವ ಕೆಎಸ್ಆರ್ಟಿಸಿ ನೌಕರರು ಮತ್ತು ಅವರ ಕುಟುಂಬದವರಿಗೆ ಆರೋಗ್ಯ ತಪಾಸಣಾ ಸೌಲಭ್ಯಗಳನ್ನು ಕಲ್ಪಿಸಲಾಗುವುದು~ ಎಂದು ಸಾರಿಗೆ ಸಚಿವ ಆರ್. ಅಶೋಕ ತಿಳಿಸಿದರು.
ಸಾಗರ್ ಆಸ್ಪತ್ರೆ ತನ್ನ ದಶಮಾನೋತ್ಸವದ ಅಂಗವಾಗಿ ಶಾಂತಿನಗರದ ಕೆಎಸ್ಆರ್ಟಿಸಿ ನಾಲ್ಕನೇ ಡಿಪೊದಲ್ಲಿ ಹಮ್ಮಿಕೊಂಡಿದ್ದ `ಕೆಎಸ್ಆರ್ಟಿಸಿ ನೌಕರರಿಗೆ ಆರೋಗ್ಯ ತಪಾಸಣಾ ಶಿಬಿರ~ವನ್ನು ಉದ್ಘಾಟಿಸಿ ಅವರು ಮಾತನಾಡಿದರು.
`ವಾಹನ ಚಾಲನೆ ವೇಳೆ ಹೃದಯಾಘಾತ ಇತ್ಯಾದಿ ಅನಾರೋಗ್ಯದಿಂದಾಗಿ ಅಪಘಾತ ಸಂಭವಿಸಿದ ಉದಾಹರಣೆಗಳಿವೆ. ಚಾಲಕರು ಮತ್ತಿತರ ಸಿಬ್ಬಂದಿಗೆ ಆರೋಗ್ಯ ತಪಾಸಣೆ ಅತಿಮುಖ್ಯ. ಆಸ್ಪತ್ರೆಯ ಸಿಬ್ಬಂದಿ ಶಿಬಿರ ಏರ್ಪಡಿಸಿರುವುದು ಉತ್ತಮ ಸಂಗತಿ~ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಆಸ್ಪತ್ರೆಯ ಹಿರಿಯ ಕಾರ್ಯನಿರ್ವಾಹಕ ಉಪಾಧ್ಯಕ್ಷ ಡಾ. ಮದನ್ ಗಾಯಕವಾಡ್, ಹಣಕಾಸು ನಿಯಂತ್ರಣಾಧಿಕಾರಿ ಪ್ರಸನ್ನ, ಮೂಳೆ ತಜ್ಞ ಎಚ್.ಪಿ.ಸಿ. ಖಿಂಚ, ವೈದ್ಯಕೀಯ ನಿರ್ದೇಶಕ ಡಾ.ಕೇಣಿ ಮತ್ತಿತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಸುಮಾರು 500ಕ್ಕೂ ಅಧಿಕ ಸಿಬ್ಬಂದಿ ಮತ್ತು ಅವರ ಕುಟುಂಬ ವರ್ಗಶಿಬಿರದ ಪ್ರಯೋಜನ ಪಡೆದರು.