ಹುಬ್ಬಳ್ಳಿ: ರಾಜ್ಯ ಕ್ರಿಕೆಟ್ ಸಂಸ್ಥೆ (ಕೆಎಸ್ಸಿಎ) ಎಲ್ಲ ವಲಯಗಳಿಗೆ ಹಾಗೂ ಜಿಲ್ಲೆಗಳಿಗೆ ಚಟುವಟಿಕೆ ಗಳನ್ನು ವಿಸ್ತರಿಸಲು ಮುಂದಾಗಿದ್ದು, ಹುಬ್ಬಳ್ಳಿ ಭಾಗಕ್ಕೆ ಹೆಚ್ಚು ಒತ್ತು ನೀಡಲು ನಿರ್ಧರಿಸಿದೆ. ಅದರ ಭಾಗವಾಗಿ ನವೆಂಬರ್ ತಿಂಗಳಲ್ಲಿ ರಾಜನಗರ ಕೆಎಸ್ಸಿಎ ಮೈದಾನದಲ್ಲಿ ಪ್ರಾಥಮಿಕ ಹಂತದ (ಜೀರೋ ಲೆವೆಲ್) ತರಬೇತುದಾರರ ತರಬೇತಿ ಶಿಬಿರ ನಡೆಸಲಿದೆ.
`ನವೆಂಬರ್ 30ರಂದು ಶಿಬಿರ ಆರಂಭ ವಾಗಲಿದ್ದು ಮೂರು ದಿನ ನಡೆಯಲಿದೆ. ಇದಕ್ಕಾಗಿ ಸಿದ್ಧತೆ ನಡೆಯುತ್ತಿವೆ~ ಎಂದು ಕೆಎಸ್ಸಿಎ ಕಾರ್ಯಕಾರಿ ಸಮಿತಿ ಸದಸ್ಯ ಹಾಗೂ ಮಾಜಿ ಕ್ರಿಕೆಟಿಗ ವಿಜಯ ಭಾರದ್ವಾಜ್ ತಿಳಿಸಿದರು. ಡಿಸೆಂಬರ್ನಲ್ಲಿ ಈ ಮೈದಾನದಲ್ಲಿ ಕರ್ನಾಟಕ-ಹರಿಯಾಣ ತಂಡಗಳ ನಡುವೆ ರಣಜಿ ಪಂದ್ಯ ನಡೆಯಲಿರುವ ಹಿನ್ನೆಲೆಯಲ್ಲಿ ಮೈದಾನದ ಸೌಲಭ್ಯಗಳನ್ನು ಭಾನುವಾರ ಪರಿಶೀಲಿಸಿದ ಅವರು ಪತ್ರಕರ್ತರೊಂದಿಗೆ ಮಾತನಾಡಿದರು.
`ರಣಜಿ ಸೇರಿದಂತೆ ಪ್ರಮುಖ ಪಂದ್ಯಗಳನ್ನು ಸುಗಮವಾಗಿ ನಡೆಸಲು ಅನುಕೂಲವಾಗುವಂತೆ ಅವಳಿ ನಗರದ ಹಿರಿಯರನ್ನು ಸೇರಿಸಿ ಸ್ಥಳೀಯ ಸಂಘಟನಾ ಸಮಿತಿ ರಚಿಸಲಾಗುವುದು. ಆ ಮೂಲಕ ಈ ಭಾಗದಲ್ಲಿ ಕ್ರಿಕೆಟ್ಗೆ ಸಂಬಂಧಪಟ್ಟ ಚಟುವಟಿಕೆಗಳನ್ನು ಹೆಚ್ಚಿಸಲು ಪ್ರಯತ್ನಿಸಲಾಗುವುದು~ ಎಂದು ತಿಳಿಸಿದರು.
`ಕರ್ನಾಟಕ ಎಂದರೆ ಬೆಂಗಳೂರು ಎಂಬ ಭಾವನೆ ಇಲ್ಲವಾಗಬೇಕು. ಎಲ್ಲ ಭಾಗದ ಕ್ರಿಕೆಟಿಗರಿಗೂ ಅವಕಾಶಗಳು ಸಿಗಬೇಕು. ಹುಬ್ಬಳ್ಳಿ ಜನರಲ್ಲಿ ಕ್ರಿಕೆಟ್ ಪ್ರೇಮ ಸಾಕಷ್ಟಿದೆ. ಈ ರಣಜಿ ಋತುವಿನಲ್ಲಿ ನಡೆಯಲಿರುವ ಪಂದ್ಯ ಇಲ್ಲಿ ಕ್ರಿಕೆಟ್ಗೆ ಸಂಬಂಧಪಟ್ಟ ಚಟುವಟಿಕೆಗಳಿಗೆ ಹೊಸ ದಿಸೆ ತೋರಿಸಲಿದೆ~ ಎಂದು ಅವರು ಅಭಿಪ್ರಾಯಪಟ್ಟರು.