ರಾಯಚೂರು: ಮಾನ್ವಿಪಟ್ಟಣದ ಕೈಗಾರಿಕಾ ಪ್ರದೇಶದಲ್ಲಿ ಕೆಐಡಿಬಿ ಮಾಡಿರುವ ಅವ್ಯವಹಾರ ತನಿಖೆ ನಡೆಸಬೇಕು ಎಂದು ಜಯಕರ್ನಾಟಕ ಸಂಘಟನೆಯ ಜಿಲ್ಲಾ ಘಟಕವು ಮಂಗಳವಾರ ಜಿಲ್ಲಾಧಿಕಾರಿಗಳ ಕಚೇರಿ ಎದುರು ಪ್ರತಿಭಟನೆ ನಡೆಸಿದರು.
ಈ ಬಗ್ಗೆ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು. ಮಾನ್ವಿಯ ಪ್ರದೇಶದಲ್ಲಿ ಒಂದು ಇಡಸ್ಟ್ರೀಯಲ್ ಮತ್ತು ಸಣ್ಣ ಕೈಗಾರಿಕಾ ಪ್ರದೇಶ (ಆಟೋನಗರ) ಎಂಬ ಎರಡು ಭಾಗಗಳನ್ನಾಗಿ ಮಾಡಲಾಗಿದೆ. ಸಣ್ಣ ಕೈಗಾರಿಕಾ ಪ್ರದೇಶದ ಆಟೋ ಸಂಕೀರ್ಣದಲ್ಲಿ 150 ನಿವೇಶನಗಳನ್ನು ರೂಪಿಸಲಾಗಿದೆ ಎಂದು ತಿಳಿಸಿದರು.
ಕೆಐಡಿಬಿ ಅಧಿಕಾರಿಗಳು ನಿಯಮ ಉಲ್ಲಂಘನೆ ಮಾಡಿ ನಿವೇಶನಗಳನ್ನು ಹಂಚಿಕೆ ಮಾಡಿದ್ದಾರೆ. ಒಂದು ಕುಟುಂಬಕ್ಕೆ ಎರಡರಿಂದ ಐದು ನಿವೇಶನ ಮಂಜೂರು ಮಾಡಲಾಗಿದೆ ಎಂದು ಆಪಾದಿಸಿದರು.
ರೋಸ್ಟರ್ ಪದ್ಧತಿಯ ಪ್ರಕಾರ 150 ನಿವೇಶನಗಳಲ್ಲಿ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡಕ್ಕೆ ಮೀಸಲಿಡಬೇಕು, ನ್ಯಾಯಯುತವಾಗಿ ಅರ್ಜಿ ಸಲ್ಲಿಸಿ ಭೂಮಿಗಾಗಿ ಕಾಯುತ್ತಿರುವ ಅರ್ಜಿದಾರರಿಗೆ ಭೂಮಿಯನ್ನು ಮಂಜೂರು ಮಾಡಬೇಕು ಎಂದು ಆಗ್ರಹಿಸಿದರು.
ಕೆಐಡಿಬಿ ಅಕ್ರಮಗಳ ಕುರಿತು ತನಿಖೆ ನಡೆಸಬೇಕು ಎಂಬುದು ಸೇರಿದಂತೆ ಇನ್ನು ಅನೇಕ ಬೇಡಿಕೆ ಈಡೇರಿಸದೇ ಇದ್ದರೆ ಮುಂದಿನ ದಿನಗಳನ್ನು ಹೋರಾಟ ನಡೆಸಲಾಗುವುದು ಎಂದು ಸಂಘಟನೆಯ ಜಿಲ್ಲಾಧ್ಯಕ್ಷ ಎಸ್. ಶಿವಕುಮಾರ ಅವರು ಜಿಲ್ಲಾಧಿಕಾರಿಗಎ ಸಲ್ಲಿಸಿದ ಪತ್ರದಲ್ಲಿ ತಿಳಿಸಿದ್ದಾರೆ.
ಮಾನ್ವಿ ತಾಲ್ಲೂಕು ಅಧ್ಯಕ್ಷ ಎನ್.ಗುರುರಾಜ ನಾಗಲಾಪುರ, ಕಾರ್ಯಾಧ್ಯಕ್ಷ ಪಿ.ರವಿಕುಮಾರ, ಜಿಲ್ಲಾ ವಿದ್ಯಾರ್ಥಿ ಘಟಕದ ಅಧ್ಯಕ್ಷ ಜಿಯಾ ಉಲ್ ಹಕ್ ಸೌದಾಗರ್, ರವಿಕುಮಾರ ಬಿಂದಲಬಾವಿ, ಲೋಕೇಶ, ಪಿ.ಅನ್ವರ, ಎಂ.ಡಿ ರಫೀಕ್, ತಾಲ್ಲೂಕು ಪ್ರಧಾನ ಕಾರ್ಯದರ್ಶಿ ಸುದರ್ಶನಕುಮಾರ, ವೆಂಕಟೇಶ ಕೆ, ಖಾಜಾ, ಶ್ರೀನಿವಾಸ ,ಖಲೀಲ್, ಸುರೇಶ, ಜಾಫರ್, ಗೋವಿಂದ, ಜಹಗೀರ ಪಾಷಾ ಪ್ರತಿಭಟನೆಯಲ್ಲಿದ್ದರು.