ಬೆಂಗಳೂರು: `ಕೆ.ಕಾಮರಾಜ್ ಅವರು ಸಜ್ಜನ ಮತ್ತು ಸರಳ ರಾಜಕಾರಣಿಯಾಗಿದ್ದರು~ ಎಂದು ಕೇಂದ್ರದ ಮಾಜಿ ಸಚಿವ ಎಂ.ವಿ.ರಾಜಶೇಖರನ್ ಹೇಳಿದರು.ಗಾಂಧಿ- ಕಾಮರಾಜ್ ಸ್ಮಾರಕ ಟ್ರಸ್ಟ್ ಭಾನುವಾರ ಗಾಂಧಿಭವನದಲ್ಲಿ ಆಯೋಜಿಸಿದ್ದ ಕೆ.ಕಾಮರಾಜ್ ಅವರ 110 ನೇ ಜನ್ಮ ದಿನಾಚರಣೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
`ತಮಿಳುನಾಡು ರಾಜ್ಯವು ವಿದ್ಯಾಭ್ಯಾಸ ಮತ್ತು ಕೈಗಾರಿಕಾ ಕ್ಷೇತ್ರದಲ್ಲಿ ಬೆಳವಣಿಗೆ ಹೊಂದಲು ಕೆ.ಕಾಮರಾಜ್ ಅವರ ಪ್ರಯತ್ನವೇ ಕಾರಣವಾಗಿದೆ. ಎಲ್ಲರಿಗೂ ಶಿಕ್ಷಣ ದೊರೆಯುವಂತಾಗಲು ಬಿಸಿ ಊಟದ ಯೋಜನೆಯನ್ನು ಜಾರಿಗೆ ತಂದವರು~ ಎಂದು ಅವರು ವಿವರಿಸಿದರು.
`ಅವರಿಗೆ ಎರಡು ಬಾರಿ ಪ್ರಧಾನಿಯಾಗಲು ಅವಕಾಶ ದೊರೆತರೂ ಸಹ ಅವರು ಪ್ರಧಾನಿ ಹುದ್ದೆಯನ್ನು ನಿರಾಕರಿಸಿದರು. ಈಗ ದೇಶಕ್ಕೆ ಅಂತಹ ರಾಜಕಾರಣಿಗಳು ಬೇಕಾಗಿದ್ದಾರೆ~ ಎಂದರು.
`ಜನಪ್ರತಿನಿಧಿಗಳು ದೇಶದ ಕಲ್ಯಾಣಕ್ಕಾಗಿ ತಮ್ಮನ್ನು ತಾವು ಸಮರ್ಪಿಸಿಕೊಂಡು ಜನಪರ ಕಾಳಜಿಗಳುಳ್ಳ ಕಾರ್ಯಗಳನ್ನು ಮಾಡಬೇಕು. ಯುವಕ ಸಂಪತ್ತು ಅತಿ ಹೆಚ್ಚಿರುವ ದೇಶ ನಮ್ಮದಾಗಿದೆ. ಅವರನ್ನು ಉಪಯುಕ್ತ ದಾರಿಯಲ್ಲಿ ನಡೆಸಬೇಕಾದ ಅವಶ್ಯಕತೆ ಇಂದು ಬಂದೊದಗಿದೆ~ ಎಂದು ಹೇಳಿದರು.
ಶಾಸಕ ದಿನೇಶ್ ಗುಂಡೂರಾವ್ ಮಾತನಾಡಿ, `ಜಾತಿ, ಧರ್ಮ, ಭಾಷೆಗಳಲ್ಲಿ ದೇಶವನ್ನು ಒಡೆಯುವ ಕೆಲಸವನ್ನು ಯಾರೂ ಮಾಡಬಾರದು. ದೇಶವನ್ನು ಆಳುವ ಜನಪ್ರತಿನಿಧಿಗಳು ತಮ್ಮ ಆತ್ಮಾವಲೋಕನ ಮಾಡಿಕೊಳ್ಳಬೇಕು~ ಎಂದರು.ಕಾರ್ಯಕ್ರಮದಲ್ಲಿ ಮಾಜಿ ಶಾಸಕ ಎಂ.ಮುನಿಸ್ವಾಮಿ ಮತ್ತಿತರರು ಉಪಸ್ಥಿತರಿದ್ದರು.