ಶಹಾಪುರ: ಅಪ್ಪಟ್ಟ ಗ್ರಾಮೀಣ ಜನತೆಯ ಉಸಿರಾಗಿ ಅದರಲ್ಲಿ ರೈತರಿಗೆ ನೆರವಿನ ಅಭಯ ನೀಡುತ್ತಾ ಹಲವಾರು ವರ್ಷಗಳಿಂದ ಕೆಲಸ ನಿರ್ವಹಿಸುತ್ತಿರುವ ಕೃಷ್ಣಾ ಗ್ರಾಮೀಣ ಬ್ಯಾಂಕ್ ಇನ್ನೂ ಹೆಚ್ಚಿನ ಗ್ರಾಹಕರ ಮನೆ ಬಾಗಿಲಿಗೆ ತಲುಪಬೇಕಾಗಿದೆ. ಸುಸಜ್ಜಿತ ಕಟ್ಟಡವನ್ನು ನಿರ್ಮಿಸಲಾಗಿದೆ.
ಹೆದ್ದಾರಿಗೆ ಹೊಂದಿಕೊಂಡಿದ್ದು ಸಾರಿಗೆ ಸಂಪರ್ಕ ಅನುಕೂಲವಿದೆ. ಬ್ಯಾಂಕಿನ ಸೇವೆಯನ್ನು ಸದ್ಭಳಕೆ ಮಾಡಿಕೊಳ್ಳಬೇಕು. ಸದಾ ನಾವು ನಿಮ್ಮ ಜೊತೆ ಸಹಕರಿಸುತ್ತೇವೆ ಎಂದು ಕೃಷ್ಣಾ ಗ್ರಾಮೀಣ ಬ್ಯಾಂಕಿನ ಮಹಾ ಪ್ರಬಂಧಕರಾದ ಟಿ. ನಾಗಪ್ಪ ಹೇಳಿದರು.
ತಾಲ್ಲೂಕಿನ ಹತ್ತಿಗೂಡೂರ ಗ್ರಾಮದ ಕೃಷ್ಣಾ ಗ್ರಾಮೀಣ ಬ್ಯಾಂಕ್ ಶಾಖೆಯನ್ನು ನೂತನ ಕಟ್ಟಡಕ್ಕೆ ಬುಧವಾರ ಸ್ಥಳಾಂತರ ಕಾರ್ಯಕ್ರಮವನ್ನು ನೆರವೇರಿಸಿ ಮಾತನಾಡಿದರು.
ಹತ್ತಿಗುಡೂರ ಗ್ರಾಮದಲ್ಲಿ ಬ್ಯಾಂಕ ಸ್ಥಾಪನೆಗೊಂಡು ಒಂದು ವರ್ಷ ಆರು ತಿಂಗಳು ಗತಿಸಿದೆ. ಒಂದು ಕೋಟಿ ಹಣ ಠೇವಣಿ ಸಂಗ್ರಹಿಸಲಾಗಿದೆ. ಅಲ್ಲದೆ ಒಂದು ಕೋಟಿ 24 ಲಕ್ಷ ಹಣವನ್ನು ವಿವಿಧ ಯೋಜನೆ ಅಡಿಯಲ್ಲಿ ಸಾಲ ಸೌಲಭ್ಯವನ್ನು ಒದಗಿಸಲಾಗಿದೆ. ಇನ್ನೂರ ಹಲವಾರು ಯೋಜನೆಗಳನ್ನು ಜಾರಿಗೆ ತರಲಾಗುವುದು. ಬ್ಯಾಂಕಿನ ವ್ಯಾಪ್ತಿಯ ದತ್ತು ಗ್ರಾಮಗಳಾದ ಕೊಳ್ಳೂರ(ಎಂ) ಬಿರನೂರ, ಕೊಂಗಂಡಿ, ಸಾವೂರ, ಮುನಮುಟಗಿ ಗ್ರಾಮದ ರೈತರು ಕೃಷಿಸಾಲ ಹಾಗೂ ಇನ್ನಿತರ ಸಾಲಸೌಲಭ್ಯಗಳನ್ನು ಪಡೆದುಕೊಳ್ಳಬೇಕು. ಅದರ ಜೊತೆಯಲ್ಲಿ ಬ್ಯಾಂಕಿನ ಬೆಳವಣಿಗೆಗೆ ಭದ್ರತಾ ಠೇವಣಿಯನ್ನು ಸಹ ನೀಡಬೇಕೆಂದು ಬ್ಯಾಂಕಿನ ಮ್ಯಾನೇಜರ ಪಿ.ಸಿ.ಚವ್ಹಾಣ ಮನವಿ ಮಾಡಿದರು.
ಸಭೆಯಲ್ಲಿ ಪ್ರಾದೇಶಿಕ ವ್ಯವಸ್ಥಾಪಕರಾದ ಎಸ್.ಕೆ.ಮಹಾಹುಲಿ ಹಾಗೂ ಗ್ರಾಮದ ಮುಖಂಡರಾದ ಮಹೇಶ ಸಾಹು, ವೈ.ಡಿ.ದೊರೆ, ಹುಸೇನಸಾಬ್, ಶಂಕರಗೌಡ ಪಾಟೀಲ್, ಶಿವರಾಜಪ್ಪ ಮಹಾಮನಿ, ಶಿವರಡ್ಡೆಪ್ಪ ಕೊಳ್ಳುರ,ಮಂಜುನಾಥ, ವೆಂಕಟೇಶ ದಳಪತಿ, ಶಿವರಾಜ ಕರಾಟೆ ಮತ್ತಿತರರು ಉಪಸ್ಥಿತರಿದ್ದರು.
ಬ್ಯಾಂಕಿ ಅಧಿಕಾರಿ ಹನುಮಂತರಾವ ಕಾರ್ಯಕ್ರಮ ನಿರ್ವಹಿಸಿದರು. ಮಾನಪ್ಪ ಜಾದವ ವಂದಿಸಿದರು.