ಬೆಂಗಳೂರು: ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ರೈತರು, ಮಹಿಳೆಯರು, ದಲಿತರು ಹಾಗೂ ಅಲ್ಪಸಂಖ್ಯಾತರ ಮತಗಳ ಮೇಲೆ ಕಣ್ಣಿಟ್ಟಿರುವ ಕರ್ನಾಟಕ ಜನತಾ ಪಕ್ಷ (ಕೆಜೆಪಿ), ಚುನಾವಣಾ ಪ್ರಣಾಳಿಕೆಯಲ್ಲಿ ಭರಪೂರ ಭರವಸೆಗಳನ್ನು ನೀಡಿದೆ.
`ಪಥವಲ್ಲ.... ಇದು ಶಪಥ....' ಎಂಬ ಘೋಷ ವಾಕ್ಯದ ಚುನಾವಣಾ ಪ್ರಣಾಳಿಕೆಯನ್ನು ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಶನಿವಾರ ಬಿಡುಗಡೆ ಮಾಡಿದರು.
ತಾವು ಬಿಜೆಪಿ ಸರ್ಕಾರದಲ್ಲಿ ಮೂರು ವರ್ಷಗಳ ಕಾಲ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಕೈಗೊಂಡಿದ್ದ ಹಲವು ಅಭಿವೃದ್ಧಿ ಕಾರ್ಯಗಳ ಜೊತೆಗೆ, 65 ವರ್ಷ ತುಂಬಿದ ರೈತರಿಗೆ ಮಾಸಾಶನ, ನೇಕಾರರು, ಮೀನುಗಾರರು, ರೈತರ ಸಾಲ ಮನ್ನಾ, ಭಾಗ್ಯಲಕ್ಷ್ಮಿ ಯೋಜನೆ ವಿಸ್ತರಣೆ, ಮಹಿಳೆಯರಿಗಾಗಿ ಪ್ರತ್ಯೇಕ ಸಹಕಾರಿ ಬ್ಯಾಂಕ್ ಸ್ಥಾಪನೆ ಸೇರಿದಂತೆ ಹಲವು ಯೋಜನೆಗಳನ್ನು ಪ್ರಕಟಿಸಿದ್ದಾರೆ.
65 ವರ್ಷ ತುಂಬಿದ ರೈತರಿಗೆ ರೂ500 ಮಾಸಾಶನ
ನೇಕಾರರು, ಮೀನುಗಾರರು ಹಾಗೂ ರೈತರ ರೂ1 ಲಕ್ಷದ ವರೆಗಿನ ಸಾಲ ಮನ್ನಾ
ರೈತರಿಗೆ ಬಡ್ಡಿ ರಹಿತ ಸಾಲ ಮುಂದುವರಿಕೆ
ಬಡ ರೈತರ ಮಕ್ಕಳ ಉನ್ನತ ಶಿಕ್ಷಣಕ್ಕೆ ಬಡ್ಡಿ ರಹಿತ ಸಾಲ
ಸರ್ಕಾರದಿಂದ ಶೇ 75ರಷ್ಟು ಬೆಳೆ ವಿಮೆ ಪಾವತಿ
ಪ್ರತಿ ತಾಲ್ಲೂಕು ಕೇಂದ್ರಗಳಲ್ಲಿ ಪ್ರಕೃತಿ ವಿಕೋಪ ನಿಧಿ ಮತ್ತು ರೈತ ವಿಪತ್ತು ನಿಧಿ ಸ್ಥಾಪನೆ
ಗ್ರಾಮೀಣ ಪ್ರದೇಶಗಳಲ್ಲಿ ಕೃಷಿ ಆಧಾರಿತ ಕೈಗಾರಿಕೆಗಳ ಸ್ಥಾಪನೆಗೆ ಒತ್ತು
5 ಸಾವಿರ ಮೆಗಾವಾಟ್ ವಿದ್ಯುತ್ ಉತ್ಪಾದನೆಗೆ ಒತ್ತು
ಮಧ್ಯಮ ವರ್ಗದ ಕುಟುಂಬಗಳಿಗೂ `ಭಾಗ್ಯಲಕ್ಷ್ಮಿ' ಮತ್ತು `ಸಂಧ್ಯಾ ಸುರಕ್ಷಾ'
ಎಲ್ಲ ಹಳ್ಳಿಗಳಿಗೆ ಶುದ್ಧ ಕುಡಿಯುವ ನೀರು ಮತ್ತು ಶೌಚಾಲಯ
ಪ್ರತ್ಯೇಕ ಮಹಿಳಾ ಸಹಕಾರಿ ಬ್ಯಾಂಕ್ ಸ್ಥಾಪನೆ
10 ಸಾವಿರ ಎಕರೆಯಲ್ಲಿ `ನವ ಬೆಂಗಳೂರು' ನಿರ್ಮಾಣ
* ಎಸ್ಸಿ/ಎಸ್ಟಿ ಕಲ್ಯಾಣಕ್ಕೆ ಬಜೆಟ್ನಲ್ಲಿ ವಾರ್ಷಿಕ ರೂ5,000 ಕೋಟಿ ಮೀಸಲು
* ಹಿಂದುಳಿದ ವರ್ಗಗಳ ಅಭಿವೃದ್ಧಿಗೆ ರೂ2,000 ಕೋಟಿ
* ಅಲ್ಪಸಂಖ್ಯಾತರ ಅಭಿವೃದ್ಧಿಗೆ ರೂ2,250 ಕೋಟಿ
* ಆದಾಯ ತೆರಿಗೆಗೆ ಒಳಪಡದ ಕುಟುಂಬಗಳಲ್ಲಿ 65 ವರ್ಷ ದಾಟಿವರಿಗೆಲ್ಲ ರೂ500 ಮಾಸಾಶನ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.