ಎಚ್.ಡಿ.ಕೋಟೆ: ಗಂಗಾ ಕಲ್ಯಾಣ ಯೋಜನೆಯ ಫಲಾನುಭವಿಗಳಿಗೆ ಸೂಕ್ತ ಸವಲತ್ತು ಒದಗಿಸದೆ ಕರ್ತವ್ಯ ಲೋಪವೆಸಗಿದ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎ.ರಾಮದಾಸ್ ಬುಧವಾರ ಆದೇಶ ನೀಡಿದರು.
ಪಟ್ಟಣದ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ನಡೆದ ಕೆ.ಡಿ.ಪಿ ಸಭೆಯಲ್ಲಿ ಮಾತನಾಡಿದ ಅವರು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.ಪ್ರತಿಯೊಂದು ಸರ್ಕಾರಿ ಕಚೇರಿಯಲ್ಲಿಯೂ ಅಲ್ಲಿರುವ ಸಿಬ್ಬಂದಿ ಯಲ್ಲಿ ಒಬ್ಬರನ್ನು ಪಿ.ಆರ್.ಓ. ಆಗಿ ನೇಮಕ ಮಾಡಬೇಕು. ಅವರು ಸಾರ್ವಜನಿಕರಿಂದ ಅರ್ಜಿ ಪಡೆದು ನಿಗದಿತ ಕೆಲಸವನ್ನು ನಿಗದಿತ ಅವಧಿಯಲ್ಲಿ ಮುಗಿಸುವಂತೆ ಕ್ರಮ ತೆಗೆದುಕೊಳ್ಳಬೇಕು. ತಪ್ಪಿದಲ್ಲಿ ಹಿರಿಯ ಅಧಿಕಾರಿಗಳು ಅಂತಹ ಅಧಿಕಾರಿಗಳ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು ಎಂದು ಸೂಚನೆ ನೀಡಿದರು.
ಮುಂದಿನ ಸಭೆಗಳಲ್ಲಿ ಬ್ಯಾಂಕ್ ಅಧಿಕಾರಿಗಳು ಕಡ್ಡಾಯವಾಗಿ ಭಾಗವಹಿಸಿ ಸರ್ಕಾರದಿಂದ ನಾಗರಿಕರಿಗೆ, ರೈತರಿಗೆ ನೀಡುವ ಸವಲತ್ತುಗಳ ಬಗ್ಗೆ ಮಾಹಿತಿ ನೀಡಬೇಕು ಹಾಗೂ ಹಿಂದಿನ ಸಭೆಗಳಲ್ಲಿ ನಡೆದ ವಿಚಾರಗಳನ್ನು ಹಾಗೂ ಆ ಕುರಿತ ಬೆಳವಣಿಗೆಗಳನ್ನು ಮುಂದಿನ ಸಭೆಯಲ್ಲಿ ತಿಳಿಸಬೇಕು ಎಂದರು.
ಲೋಕೋಪಯೋಗಿ ಇಲಾಖೆಯ ಬಗ್ಗೆ ಮಾಹಿತಿ ಪಡೆದ ಉಸ್ತುವಾರಿ ಸಚಿವರು, ಮಿನಿ ವಿಧಾನ ಸೌಧ ಮತ್ತು ಪದವಿ ಕಾಲೇಜಿನ ಕಾಮಗಾರಿಗಳು ತುಂಬ ನಿಧಾನವಾಗಿ ಆಗುತ್ತಿವೆ. ಆದಷ್ಟು ಬೇಗ ಕಾಮಗಾರಿಯನ್ನು ಮುಗಿಸಬೇಕು, ಪದವಿ ಕಾಲೇಜಿನ ಕಾಮಗಾರಿ ಉತ್ತಮವಾಗಿಲ್ಲ. ಅದನ್ನು ಈ ಕೂಡಲೆ ಪರಿಶೀಲಿಸಿ ವರದಿ ನೀಡಬೇಕೆಂದು ಸಹಾಯಕ ಎಂಜಿನಿಯರ್ ಮೋಹನ್ ಕುಮಾರ್ಗೆ ತಿಳಿಸಿದರು.
ಶವ ಸಂಸ್ಕಾರಗಳಿಗಾಗಿ ಕೊಡ ಬೇಕಾದ ಹಣ ಸರಿಯಾಗಿ ಬಳಕೆ ಯಾಗುತ್ತಿಲ್ಲ. ಸಾವಿಗೀಡಾದ ವ್ಯಕ್ತಿಯ ಸಂಸ್ಕಾರ ನಡೆಯುವ ಮುನ್ನ ಆ ಹಣವನ್ನು ಆತನ ಕುಟುಂಬಕ್ಕೆ ತಲುಪಿಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.
ಶಾಸಕ ಚಿಕ್ಕಣ್ಣ, ವಿಧಾನ ಪರಿಷತ್ ಸದಸ್ಯರಾದ ಸಿದ್ದರಾಜು, ಉಪ ವಿಭಾಗಧಿಕಾರಿ ಲಿಂಗಮೂರ್ತಿ, ಜಿ.ಪಂ ಕಾರ್ಯ ನಿರ್ವಾಹಣಧಿಕಾರಿ ಜಿ. ಸತ್ಯವತಿ, ತಹಶೀಲ್ದಾರ್ ಎನ್.ಸಿ. ಜಗದೀಶ್, ಇ.ಓ. ಷಡಕ್ಷರಿಸ್ವಾಮಿ, ಬಿ.ಇ.ಒ. ಬಸವರಾಜು ಸೇರಿದಂತೆ ತಾಲ್ಲೂಕಿನ ಎಲ್ಲ ಇಲಾಖೆಯ ಹಿರಿಯ ಅಧಿಕಾರಿಗಳು, ಟಿ.ಎ.ಪಿ.ಸಿ.ಎಂ.ಎಸ್ ಅಧ್ಯಕ್ಷ ಬಸವರಾಜಪ್ಪ, ಎಂ.ಡಿ. ಮಂಚಯ್ಯ ಭಾಗವಹಿಸಿದ್ದರು.
ಕಾರ್ಯಕರ್ತರ ಸಭೆ: ಅಭಿವೃದ್ಧಿ ಕಾರ್ಯಗಳಿಗೆ ವಿದ್ಯಾರ್ಥಿಗಳನ್ನು ಬಳಸಿಕೊಳ್ಳುವ ಉದ್ದೇಶದಿಂದ ವಿದ್ಯಾ ರ್ಥಿಗಳ ಜೊತೆ ಸಂವಾದ ನಡೆಸುತ್ತಿ ರುವುದಾಗಿ ಸಚಿವ ರಾಮದಾಸ್ ಹೇಳಿದರು. ಪಟ್ಟಣದ ಮಂಜು ನಾಥ ಫಂಕ್ಷನ್ ಹಾಲ್ನಲ್ಲಿ ನಡೆದ ಪಕ್ಷದ ಕಾರ್ಯಕರ್ತರ ಸಭೆಯಲ್ಲಿ ಅವರು ಮಾತನಾಡಿದರು. ವಿಧಾನ ಪರಿಷತ್ ಸದಸ್ಯ ಸಿದ್ದ ರಾಜು, ಪಕ್ಷದ ತಾಲ್ಲೂಕು ಘಟಕದ ಅಧ್ಯಕ್ಷ ಶಿವರಾಜಪ್ಪ, ಎಚ್.ಸಿ.ಶಿವಣ್ಣ, ಜಿ.ಪಂ. ಸದಸ್ಯೆ ಭಾಗ್ಯ ನಿಂಗರಾಜು, ರುದ್ರಪ್ಪ, ವೈ.ಟಿ.ಮಹೇಶ್, ಎಂ.ಜಿ. ರಾಮ ಕೃಷ್ಣಪ್ಪ, ಚಿಕ್ಕವೀರನಾಯಕ, ಜೆ.ಪಿ. ಶಿವರಾಜು, ಪುಟ್ಟಯ್ಯ, ಟಿಎಪಿಸಿ ಎಂಎಸ್ ಅಧ್ಯಕ್ಷ ಬಸವ ರಾಜಪ್ಪ, ಪರೀಕ್ಷೀತರಾಜೇ ಅರಸ್ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.