ಚನ್ನರಾಯಪಟ್ಟಣ: ತಾಲ್ಲೂಕಿನ ಕೆಡಿಪಿ ಸಭೆಯನ್ನು ದಿಢೀರ್ ಮುಂದೂಡಿದ ಘಟನೆ ಸೋಮವಾರ ನಡೆಯಿತು. ಮುಂದಿನ ಸಭೆಯನ್ನು ಮೇ 14ರಂದು ಆಯೋಜಿಸಲು ತೀರ್ಮಾನಿಸಲಾಯಿತು.
ಗೂರಮಾರನಹಳ್ಳಿ ಗ್ರಾಮದಲ್ಲಿ ರುವ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಕೆಡಿಪಿ ಸಭೆ ಇನ್ನೇನು ಆರಂಭವಾಗುವಷ್ಟರಲ್ಲಿ ಸಭೆಯಲ್ಲಿ ಆಸೀನರಾಗಿದ್ದ ಶಾಸಕ ಸಿ.ಎಸ್.ಪುಟ್ಟೇಗೌಡ ಅವರು, ಸಭೆ ಮುಂದೂಡಬೇಕು ಎಂದರು. ಆಗ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಕೆ.ಬಿ. ನಿಂಗರಾಜಪ್ಪ ಮಾತನಾಡಿ, ಅನಿವಾರ್ಯ ಕಾರಣದಿಂದ ಸಭೆಯನ್ನು ಮುಂದೂಡಲಾಗಿದೆ. ಮೇ 14ಕ್ಕೆ ಸಭೆ ನಡೆಯಲಿದೆ ಎಂದು ಪ್ರಕಟಿಸಿದರು.
ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ರಂಗಮ್ಮ ರಾಮಕೃಷ್ಣೇಗೌಡ, ಉಪಾಧ್ಯಕ್ಷ ಬಿ.ಎಸ್. ಮಲ್ಲೇಶ್, ಜಿಲ್ಲಾ ಪಂಚಾಯಿತಿ ಸದಸ್ಯ ಶಿವಶಂಕರ್ ಕುಂಟೆ, ನಾಮಕಾರಣಗೊಂಡ ಸದಸ್ಯರಾದ ಪಿ.ಎ. ನಾಗರಾಜು, ನಿಂಗೇಗೌಡ. ನಿಂಗದೇವರು, ಜಾನ್ರೋನಾಲ್ಡ್, ದೇವರಾಜು, ವಿಮಲಮ್ಮ ಇದ್ದರು.
ಇದಕ್ಕೂ ಮುನ್ನಾ ಕೆಡಿಪಿಗೆ ನಾಮಕಾರಣಗೊಂಡ ಸದಸ್ಯ ಪಿ.ಎ. ನಾಗರಾಜು ಮಾತನಾಡಿ, ಸಭೆಯ ಬಗ್ಗೆ ನಾಮಕಾರಣಗೊಂಡ ಸದಸ್ಯರಿಗೆ ಸರಿಯಾಗಿ ಮಾಹಿತಿ ನೀಡುತ್ತಿಲ್ಲ. ಅಜೆಂಡವನ್ನು ನೀಡುತ್ತಿಲ್ಲ ಎಂದು ಅಧಿಕಾರಿಗಳ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.
ಅಧಿಕಾರಿಗಳು ತಾರತಮ್ಯ ಮಾಡದೇ ಎಲ್ಲರಿಗೆ ಸರಿಯಾದ ಮಾಹಿತಿ ನೀಡಬೇಕು ಎಂದು ಶಾಸಕರು, ಅಧಿಕಾರಿಗಳ ಗಮನಕ್ಕೆ ತಂದರು.
ಏ. 27ಕ್ಕೆ ಕೆಡಿಪಿ ಸಭೆ ಆಯೋಜಿಸಲಾಗಿತ್ತು. ಅಂದು ಸಚಿವರು ತಾಲ್ಲೂಕಿನಲ್ಲಿ ಬರ ಪರಿಸ್ಥಿತಿ ಅಧ್ಯಯನ ನಡೆಸಿದ್ದರಿಂದ ಕೆಡಿಸಿ ಸಭೆಯನ್ನು ಸೋಮವಾರಕ್ಕೆ ಮುಂದೂಡಲಾಗಿತ್ತು.