ಚನ್ನರಾಯಪಟ್ಟಣ: ಪ್ರಗತಿ ಪರಿಶೀಲನಾ ಸಭೆಯಲ್ಲಿ ನಾಮನಿರ್ದೇಶಿತ ಸದಸ್ಯರೊಂದಿಗೆ ಸ್ಥಳೀಯ ಶಾಸಕರು ಅನುಚಿತವಾಗಿ ವರ್ತಿಸಿದರು ಎಂದು ಕೆಡಿಪಿ ನಾಮನಿರ್ದೇಶಿತ ಸದಸ್ಯ ಪಿ.ಎ.ನಾಗರಾಜು ದೂರಿದರು.
ಪಟ್ಟಣದಲ್ಲಿ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ ವಾರ ನಡೆದ ಕೆಡಿಪಿ ಸಭೆಯಲ್ಲಿ ಸೆಸ್ಕ್ ಅಧಿಕಾರಿಗಳ ಅಕ್ರಮಗಳನ್ನು ಬಯಲಿಗೆಳೆಯಲು ನಾಮನಿರ್ದೇಶಿತ ಸದಸ್ಯರು ಯತ್ನಿಸಿದೆವು.
ಆಗ ಮಧ್ಯ ಪ್ರವೇಶಿಸಿದ ಶಾಸಕ ಸಿ.ಎಸ್. ಪುಟ್ಟೇಗೌಡ ಅವರು, ಅಧಿಕಾರಿಗಳ ಪರ ವಕಾಲತ್ತು ವಹಿಸಿ. ಅಧಿಕಾರಿಗಳು ಯಾವುದೇ ತಪ್ಪು ಮಾಡಿಲ್ಲ ಎಂಬಂತೆ ಬಿಂಬಿಸಲು ಯತ್ನಿಸಿದರು ಎಂದು ಆರೋಪಿಸಿದರು.
ನಾಮನಿರ್ದೇಶಿತ ಸದಸ್ಯರು ಹಕ್ಕುಗಳನ್ನು ಮೊಟಕುಗೊಳಿಸುವುದು ತರವಲ್ಲ. ಈ ಸದಸ್ಯರು ಯಾರದೋ ಮರ್ಜಿಗೊಳಗಾಗಿ ಕೆಲಸ ಮಾಡುವ ಅಗತ್ಯವಿಲ್ಲ. ಬಿಜೆಪಿ ಸರ್ಕಾರ ಭ್ರಷ್ಟಾಚಾರದಲ್ಲಿ ಮುಳುಗಿದೆ ಎಂದು ಟೀಕಿಸಲು ಶಾಸಕರಿಗೆ ಕೆಡಿಪಿ ಸಭೆ ವೇದಿಕೆಯಲ್ಲ. ಇದನ್ನು ವಿಧಾನಮಂಡಲದ ಅಧಿವೇಶನದಲ್ಲಿ ಚರ್ಚಿಸುವುದು ಸೂಕ್ತ ಎಂದು ತಿರುಗೇಟು ನೀಡಿದರು.
ಕೆಡಿಪಿ ಸಭೆಯಲ್ಲಿ ಅಜೆಂಡ ಪ್ರತಿ ನೀಡುವುದಿಲ್ಲ. ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ ಬಗ್ಗೆ ಸರಿಯಾದ ಮಾಹಿತಿ ನೀಡಿಲ್ಲ. ಹಾಗಾಗಿ ಕಳೆದ ವಾರ ನಡೆದ ಕೆಡಿಪಿ ಸಭೆಯನ್ನು ಅಸಿಂಧುಗೊಳಿಸಿ ಮತ್ತೊಮ್ಮೆ ಸಭೆ ಕರೆದು ವಿಸ್ತೃತವಾಗಿ ಚರ್ಚಿಸಬೇಕು ಎಂದು ಆಗ್ರಹಿಸಿದರು.
ಆಶ್ರಯ ಸಮಿತಿ, ಭೂನ್ಯಾಯ ಮಂಡಳಿ ಸಭೆಯನ್ನು ಇದುವರೆಗೆ ಕರೆದಿಲ್ಲ. ಕೂಡಲೇ ಸಭೆ ಕರೆಯಬೇಕು. ಮುಂದಿನ ಕೆಡಿಪಿ ಸಭೆಯಲ್ಲಿ ಶಾಸಕರು ಅಸಭ್ಯವಾಗಿ ವರ್ತಿಸಿದರೆ ಸಭೆ ಬಹಿಷ್ಕರಿಸಲಾಗುವುದು ಎಂದು ಎಚ್ಚರಿಸಿದರು
ಸುದ್ದಿಗೋಷ್ಠಿಯಲ್ಲಿ ನಾಮನಿರ್ದೇಶಿತ ಸದಸ್ಯರಾದ ನಿಂಗೇಗೌಡ, ವಿಮಲ, ತಾಲ್ಲೂಕು ಬಿಜೆಪಿ ಅಧ್ಯಕ್ಷ ಎ.ಆರ್. ನಾಗರಾಜು ಇತರರು ಇದ್ದರು.