ಬೆಂಗಳೂರು: ತಮಗೆ ಬೇಕಾದವರಿಗೆ ಉದ್ಯೋಗ ಕೊಡಿಸಲು ಕೆಪಿಎಸ್ಸಿ ಅಧ್ಯಕ್ಷರು ಮತ್ತು ಸದಸ್ಯರ ಮೇಲೆ ಬಹುತೇಕ ಎಲ್ಲ ರಾಜಕಾರಣಿಗಳೂ ಪ್ರಭಾವ ಬೀರಿದ್ದಾರೆ. ಬೇಕಾದರೆ ಎಲ್ಲ ಸದಸ್ಯರ ದೂರವಾಣಿ ಸಂಖ್ಯೆಗಳನ್ನು ಒಮ್ಮೆ ಪರಿಶೀಲಿಸಲಿ ಎಂದು ಜೆಡಿಎಸ್ನ ಎಚ್.ಡಿ.ರೇವಣ್ಣ ಸವಾಲು ಹಾಕಿದರು.
‘ಪರಿಶಿಷ್ಟ ಜಾತಿಯ ಗೋನಾಳ ಭೀಮಪ್ಪ ಅವರನ್ನು ಎಚ್.ಡಿ.ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದಾಗ ಕೆಪಿಎಸ್ಸಿ ಅಧ್ಯಕ್ಷರನ್ನಾಗಿ ನೇಮಿಸಲಾಗಿತ್ತು. ಭೀಮಪ್ಪ ಮನೆ ಪರಿಸ್ಥಿತಿ ಏನು ಎನ್ನುವುದು ನನಗೆ ಗೊತ್ತು’ ಎಂದು ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.
‘ನೇಮಕಾತಿಯಲ್ಲಿ ಅಕ್ರಮ ನಡೆದಿದ್ದರೆ ಕ್ರಮ ತೆಗೆದುಕೊಳ್ಳಲಿ. ಆದರೆ, ರಾಜಕಾರಣಿಗಳು ಎಷ್ಟು ಬಾರಿ ದೂರವಾಣಿ ಕರೆ ಮಾಡಿ ಒತ್ತಡ ಹೇರಿದ್ದಾರೆ ಎನ್ನುವುದನ್ನೂ ತನಿಖೆ ಮಾಡಲಿ. ಆಗ ಸತ್ಯ ಏನು ಎನ್ನುವುದು ಗೊತ್ತಾಗುತ್ತದೆ’ ಎಂದೂ ಅವರು ಹೇಳಿದರು. ಇಷ್ಟಕ್ಕೂ ದೂರವಾಣಿ ಕರೆ ಮಾಡಿಲ್ಲ ಎಂದು ಹೇಳುವ ರಾಜಕಾರಣಿ ಯಾರಿದ್ದಾರೆ ಎಂದೂ ರೇವಣ್ಣ ಪ್ರಶ್ನಿಸಿದರು.
‘ಮಾಟ ಮಂತ್ರ ಮೊದಲು ದೆಹಲಿಯಲ್ಲಿ ನಿಲ್ಲಲಿ’: ‘ಮಾಟ– ಮಂತ್ರ ಹೆಚ್ಚು ನಡೆಯುವುದು ದೆಹಲಿಯ ಕಾಂಗ್ರೆಸ್ ಕಚೇರಿಯಲ್ಲಿ. ಹೀಗಾಗಿ ರಾಷ್ಟ್ರಮಟ್ಟದಲ್ಲೇ ಮೊದಲು ಅದನ್ನು ನಿಷೇಧಿಸುವ ಕಾಯ್ದೆ ಜಾರಿಯಾಗಬೇಕು. ಅದಕ್ಕೆ ನಮ್ಮ ಪಕ್ಷ ಪೂರ್ಣ ಬೆಂಬಲ ನೀಡಲಿದೆ’ ಎಂದು ಎಚ್.ಡಿ.ರೇವಣ್ಣ ಹೇಳಿದರು.
ಮಾಟ– ಮಂತ್ರದ ನಿಷೇಧ ನೋಡಿಕೊಳ್ಳಲು ಪ್ರತ್ಯೇಕ ಇಲಾಖೆ ರಚಿಸಿ, ಅದರ ಉಸ್ತುವಾರಿಯನ್ನು ಕಾನೂನು ಸಚಿವ ಟಿ.ಬಿ.ಜಯಚಂದ್ರ ಅವರಿಗೇ ವಹಿಸಬೇಕು ಎಂದು ರೇವಣ್ಣ ವ್ಯಂಗ್ಯವಾಡಿದರು.
ನನಗೇನೂ ಆಗೋಲ್ಲ
ನನ್ನದು ಸ್ವಾತಿ ನಕ್ಷತ್ರ. ನನ್ನ ವಿರುದ್ಧ ಯಾವುದೇ ಮಾಟ–ಮಂತ್ರ ನಡೆಸಿದರೂ ಅದು ನನಗೆ ತಾಗುವುದಿಲ್ಲ. ಬದಲಿಗೆ, ಅದು ಮಾಡಿಸಿದವರಿಗೇ ತೊಂದರೆ ಕೊಡುತ್ತದೆ.
ಎಚ್.ಡಿ. ರೇವಣ್ಣ