ಬೆಂಗಳೂರು: ‘2011 ರಲ್ಲಿ ಕೆಪಿಎಸ್ಸಿ ನೇಮಕಾತಿಯಲ್ಲಿ ನಡೆದ ಅಕ್ರಮ ಕುರಿತು ಸಿಐಡಿ ಅಧಿಕಾರಿಗಳು ಮೂರು ತಿಂಗಳ ಹಿಂದೆಯೇ ಸಲ್ಲಿಸಿರುವ ವರದಿಯನ್ನು ಸರ್ಕಾರ ಈ ಕೂಡಲೇ ಬಹಿರಂಗಪಡಿಸಬೇಕು’ ಎಂದು ಲೋಕಸತ್ತಾ ಪಕ್ಷದ ಕಾರ್ಯಕಾರಿ ಸಮಿತಿ ಸದಸ್ಯ ರವಿ ಕೃಷ್ಣಾರೆಡ್ಡಿ ಆಗ್ರಹಿಸಿದರು.
ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಸರ್ಕಾರ ವರದಿಯನ್ನು ತಕ್ಷಣವೇ ಬಹಿರಂಗಪಡಿಸಬೆಕು. ಇಲ್ಲವಾದರೆ, ಲೋಕಸತ್ತಾ ಪಕ್ಷವು ವರದಿಯನ್ನು ಸಂಪೂರ್ಣವಾಗಿ ಬಹಿರಂಗಪಡಿಸಲಿದೆ’ ಎಂದು ಎಚ್ಚರಿಕೆ ನೀಡಿದರು.
‘ಮುಂದಿನ ನೇಮಕಾತಿಗಳ ಬಗ್ಗೆ ದೀರ್ಘಕಾಲ ಪರಿಣಾಮ ಬೀರುವಂತಹ ಕ್ರಮಗಳನ್ನು ಕೈಗೊಳ್ಳುವ ಬದಲು ಸರ್ಕಾರ ದಿವ್ಯ ಮೌನವಹಿಸಿದೆ. ಅಕ್ರಮ ಎಸಗಿರುವವರ ವಿರುದ್ಧ ಶಿಸ್ತು ಕ್ರಮ ಕೈಗೊಂಡು, ಅನ್ಯಾಯಕ್ಕೆ ಒಳಗಾಗಿರುವ ಅಭ್ಯರ್ಥಿಗಳಿಗೆ ನ್ಯಾಯ ಒದಗಿಸಬೇಕು’ ಎಂದು ಅವರು ಒತ್ತಾಯಿಸಿದರು.
‘ಸರ್ಕಾರವು ಈ ಕೂಡಲೇ ಸಿಐಡಿ ವರದಿಯ ಆಧಾರದ ಮೇಲೆ, ತನ್ನ ಹಿಂದಿನ ನೇಮಕಾತಿ ಆದೇಶವನ್ನು ಹಿಂದಕ್ಕೆ ಪಡೆದು, 2011 ರ ನೇಮಕಾತಿ ಪ್ರಕ್ರಿಯೆಯನ್ನು ಸಂಪೂರ್ಣವಾಗಿ ಕೈ ಬಿಡಬೇಕು. ಭ್ರಷ್ಟರ ಮೇಲೆ ಅತಿ ಶೀಘ್ರದಲ್ಲಿ ಕಾನೂನು ಕ್ರಮ ಕೈಗೊಳ್ಳಬೇಕು’ ಎಂದು ಹೇಳಿದರು.