ಮೈಸೂರು: ನಗರದ ದೇಜಗೌ ಟ್ರಸ್ಟ್ ನೀಡುವ 2012 ನೇ ಸಾಲಿನ `ವಿಶ್ವಮಾನವ ಪ್ರಶಸ್ತಿ'ಗೆ ಹಿರಿಯ ಸಾಹಿತಿಗಳಾದ ಡಾ.ಕೆ.ಭೈರವಮೂರ್ತಿ ಮತ್ತು ಡಾ.ಮ.ಗು.ಬಿರಾದಾರ ಆಯ್ಕೆಯಾಗಿದ್ದು, ಇವರಿಗೆ 25 ಸಾವಿರ ರೂಪಾಯಿ ನಗದು ಮತ್ತು ಪ್ರಶಸ್ತಿ ಫಲಕವನ್ನು ನೀಡಲಾಗುವುದು.
2012 ನೇ ಸಾಲಿನ `ಶ್ರೀಮತಿ ಸಾವಿತ್ರಮ್ಮ ದೇಜಗೌ' ಪ್ರಶಸ್ತಿಯನ್ನು ಡಾ.ಕೆ.ಆರ್.ಸಂಧ್ಯಾರೆಡ್ಡಿ ಮತ್ತು ಡಾ. ವಿಜಯಮಾಲ ರಂಗನಾಥ್ ಅವರಿಗೆ ನೀಡಲಾಗುತ್ತಿದ್ದು, ಈ ಪ್ರಶಸ್ತಿಯು 20 ಸಾವಿರ ರೂಪಾಯಿ ನಗದು ಮತ್ತು ಫಲಕವನ್ನು ಒಳಗೊಂಡಿದೆ.
ಕುವೆಂಪು ವಿದ್ಯಾವರ್ಧಕ ಟ್ರಸ್ಟ್ ವತಿಯಿಂದ ನೀಡುವ `ದಿವಂಗತ ಎಚ್.ಕೆ.ವೀರಣ್ಣಗೌಡ' ಪತ್ರಿಕೋದ್ಯಮ ಪ್ರಶಸ್ತಿಯನ್ನು ಕನ್ನಡಪ್ರಭ ಪತ್ರಿಕೆಯ ಮೈಸೂರು ವಿಭಾಗದ ಮುಖ್ಯಸ್ಥ ಅಂಶಿ ಪ್ರಸನ್ನಕುಮಾರ್ ಅವರಿಗೆ ನೀಡಲಾಗುವುದು. ಈ ಪ್ರಶಸ್ತಿ15 ಸಾವಿರ ರೂಪಾಯಿ ನಗದು ಮತ್ತು ಪ್ರಶಸ್ತಿ ಫಲಕವನ್ನು ಒಳಗೊಂಡಿದೆ.
ಡಿ.30ರಂದು ನಗರದಲ್ಲಿ ನಡೆಯಲಿರುವ ಕುವೆಂಪು ಜನ್ಮೋತ್ಸವ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಕುವೆಂಪು ವಿದ್ಯಾವರ್ಧಕ ಟ್ರಸ್ಟ್ ಕಾರ್ಯದರ್ಶಿ ಶಿವಸುಂದರ ಸತ್ಯೇಂದ್ರ ತಿಳಿಸಿದ್ದಾರೆ.