ಮುದಗಲ್ಲ: ಸಮೀಪದ ಕನ್ನಾಪೂರಹಟ್ಟಿ ಗ್ರಾಮದ ಬಳಿ ಇರುವ ಕೆರೆ ತೀರದ ಪ್ರದೇಶವನ್ನು ಅಕ್ಕಪಕ್ಕ ಜಮೀನು ಮಾಲೀಕರು ಒತ್ತುವರಿ ಮಾಡಿಕೊಂಡಿದ್ದು, ಸೂಚನೆ ಹಾಗೂ ಮೌಖಿಕ ತಾಕೀತು ಮಾಡುವ ಮೂಲಕ ಅಧಿಕಾರಿಗಳು ಮೌನಕ್ಕೆ ಶರಣಾಗಿದ್ದಾರೆ ಎನ್ನುವ ಆರೋಪಗಳು ಕೇಳಿ ಬರುತ್ತಿವೆ.
ಕನ್ನಾಪುರಹಟ್ಟಿ ಕೆರೆ ತೀರದ ಪ್ರದೇಶದ ಪಕ್ಕದಲ್ಲಿರುವ ಕೂಡ್ಲೆಪ್ಪ ಹೊಳೆಯಪ್ಪ ಎಂಬುವವರು ತಮ್ಮ 4 ಎಕರೆ 32ಗುಂಟೆ ಜಮೀನನ್ನು ಆನಂದ ಎಂಬುವವರಿಗೆ ಮಾರಾಟ ಮಾಡಿದ್ದಾರೆ. ಖರೀದಿ ಮಾಡಿದ ಆನಂದ ಎನ್ನುವವರು ಕೆರೆ ತೀರವನ್ನು ಅತಿಕ್ರಮಣ ಮಾಡಿದ್ದಾರೆ ಎಂದು ಪ.ಪಂ. ಸ್ಥಾಯಿ ಸಮಿತಿ ಅಧ್ಯಕ್ಷ ರಾಮಣ್ಣ ಹಿರೇಮನಿ ಆರೋಪಿಸಿದ್ದಾರೆ.
ಕಳೆದ ವರ್ಷವಷ್ಟೆ ಲಕ್ಷಾಂತರ ಹಣ ಖರ್ಚು ಮಾಡಿ ಕೆರೆಯ ಹೂಳು ಎತ್ತಲಾಗಿದೆ. ಆದರೆ, ಅಕ್ಕ ಪಕ್ಕದ ಜಮೀನು ಮಾಲೀಕರು ಒತ್ತುವರಿ ಮಾಡಿಕೊಂಡು ಭಾರಿ ಪ್ರಮಾಣದ ತಡೆಗೋಡೆ ನಿರ್ಮಿಸಿದ್ದು ಇದರಿಂದ ಕೆರೆಯ ಮುಖ್ಯ ಒಡ್ಡು ಒಡೆದು ಹೋಗುವ ಭೀತಿ ಎದುರಾಗಿದೆ. ಈ ನಿಟ್ಟಿನಲ್ಲಿ ಅತಿಕ್ರಮಿಸಿಕೊಂಡ ಪಕ್ಕದ ಜಮೀನುಗಳ ಮಾಲೀಕರ ವಿರುದ್ಧ ಕ್ರಮ ಕೈಕೊಳ್ಳುವ ಅಗತ್ಯವಿದೆ.
ಈ ಕುರಿತು ತಹಸೀಲ್ದಾರ ಎಂ.ರಾಚಪ್ಪ ಅವರನ್ನು `ಪ್ರಜಾವಾಣಿ~ ಸಂಪರ್ಕಿಸಿದಾಗ, `ಒತ್ತುವರಿ ತೆರವಿಗೆ 15 ದಿನಗಳ ಕಾಲಾವಕಾಶ ನೀಡಲಾಗಿದೆ. ತೆರವುಗೊಳಿಸದಿದ್ದಲ್ಲಿ ಸೂಕ್ತ ಕ್ರಮ ಕೈಕೊಳ್ಳುವುದಾಗಿ ಭರವಸೆ ನೀಡಿದರು.