ನೆಲಮಂಗಲ: ಪಟ್ಟಣದ ಅಡೇಪೇಟೆ ಹಿಂಭಾಗದಲ್ಲಿರುವ ನೆಲಮಂಗಲ ಕೆರೆ ಕೋಡಿ ಒಡೆದು ಸುತ್ತಮುತ್ತಲಿನ ಬಡಾವಣೆಗಳ ಮನೆಗಳಿಗೆ ನುಗ್ಗಿದ್ದ ನೀರನ್ನು ಹೊರಹಾಕಿರುವ ನಿವಾಸಿಗಳು, ಕಲುಷಿತಗೊಂಡಿದ್ದ ಮನೆಯ ತೊಟ್ಟಿಗಳನ್ನು ಸಹ ಶುದ್ಧಗೊಳಿಸಿದ್ದಾರೆ.
ಸೋಮವಾರ ಬಿಸಿಲು ಇದ್ದಿದ್ದರಿಂದ ರಸ್ತೆಗಳಲ್ಲಿ ಶೇಖರಣೆಗೊಂಡಿದ್ದ ನೀರು ಇಂಗಿದೆ. ಅಲ್ಲಲ್ಲಿ ಬಡಾವಣೆಗಳ ತಗ್ಗು ಪ್ರದೇಶದಲ್ಲಿ ಶೇಖರಣೆಯಾಗಿದ್ದ ನೀರು ಹಾಗೇ ಇದೆ. ಅಡಕಿ ಮಾರನಹಳ್ಳಿ ರಾಷ್ಟ್ರೀಯ ಹೆದ್ದಾರಿ 4ರಲ್ಲಿದ್ದ ನೀರು ಹರಿದು ಸಂಚಾರ ಸುಗಮವಾಗಿದೆ.
ಒಡೆದಿದ್ದ ಕೆರೆಯ ಭಾಗವನ್ನು ನೀರಾವರಿ ಇಲಾಖೆ ಸಿಬ್ಬಂದಿ ಮುಚ್ಚುತ್ತಿದ್ದು, ನೀರಿನ ಹರಿವು ಸಂಪೂರ್ಣ ನಿಂತಿದೆ. ಕಾಮಗಾರಿ ಪ್ರಗತಿಯಲ್ಲಿದೆ.
ಕೆರೆಯ ಸುತ್ತಲು ಬೆಳೆದಿದ್ದ ಕಳೆಯನ್ನೂ ಸಹ ಸ್ವಚ್ಛಗೊಳಿಸಲಾಗುತ್ತಿದೆ. ಭಾನುವಾರ ಜಿಲ್ಲಾ ಉಸ್ತುವಾರಿ ಸಚಿವ ಕೃಷ್ಣ ಬೈರೇಗೌಡ ಕೆರೆಗೆ ಚರಂಡಿ ನೀರು ಹರಿಯದಂತೆ ನೋಡಿಕೊಳ್ಳುವ ಭರವಸೆ ನೀಡಿದ್ದಾರೆ.