ಸಿಂಧನೂರು: ತಾಲ್ಲೂಕಿನ ವಿವಿಧ ಗ್ರಾಮಗಳಲ್ಲಿ ಕೆರೆ ನಿರ್ಮಾಣ ಕಾಮಗಾರಿಗಳಲ್ಲಿ ಅವ್ಯವಹಾರ ನಡೆಯುವುದು ಸಾಮಾನ್ಯವಾಗಿಬಿಟ್ಟಿದೆ. ಕಾಲುವೆಗೆ ನೀರು ಸ್ಥಗಿತಗೊಳ್ಳುವ ಸಮಯದಲ್ಲಿ ಅವಸರವಸರದಿಂದ ಕೆಲಸ ಮುಗಿಸಿ ನೀರು ತುಂಬುವ ಮೂಲಕ ಮಾಡಿದ ಅವ್ಯವಹಾರ ಮುಚ್ಚಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.
ಇದೇ ರೀತಿ ಇತ್ತೀಚೆಗೆ ಬಳಗಾನೂರು ಗ್ರಾಮದ ಕುಡಿಯುವ ನೀರಿನ ಕೆರೆಗೆ ಒಂದು ಕೋಟಿಗಿಂತಲೂ ಹೆಚ್ಚು ಹಣವನ್ನು ವಿವಿಧ ಯೋಜನೆಗಳಿಂದ ಪಡೆದು ಖರ್ಚು ಮಾಡಲಾಗಿದೆ. ಆದಾಗ್ಯೂ ಕೆರೆ ಕಾಮಗಾರಿ ಇನ್ನೂ ಪೂರ್ಣಗೊಂಡಿರುವುದಿಲ್ಲ. ಆದರೆ ಅಪೂರ್ಣ ಕೆರೆಯಲ್ಲಿಯೇ ನೀರು ತುಂಬಿಸುವ ಮೂಲಕ ಸರ್ಕಾರದ ಹಣವನ್ನು ಲಪಟಾಯಿಸುವ ಸಂಚು ನಡೆದಿದೆ ಎನ್ನುವುದು ಗ್ರಾಮಸ್ಥರ ಆರೋಪ. ಗ್ರಾಮ ಪಂಚಾಯಿತಿ ಆಡಳಿತ ಮಂಡಳಿ ಮತ್ತು ಅಧಿಕಾರಿ ವರ್ಗದವರು ಶಾಮೀಲಾಗಿ ಕೆರೆ ನಿರ್ಮಾಣದಲ್ಲಿ ಅವ್ಯವಹಾರ ಎಸಗಿದ್ದು ಈಗ ಏಕಾಏಕಿ ಅಪೂರ್ಣಗೊಂಡ ಕೆರೆಗೆ ನೀರು ತುಂಬಿಸುತ್ತಿರುವ ಬಗ್ಗೆ ಗ್ರಾಮಸ್ಥರು ಶನಿವಾರ ಪ್ರತಿಭಟನೆ ಮಾಡಿದರು. ಕೆರೆ ಪೂರ್ಣಗೊಳ್ಳುವವರೆಗೆ ಗುತ್ತಿಗೆದಾರರಿಗೆ ಹಣ ಪಾವತಿಸದಂತೆ ಜಿಲ್ಲಾಧಿಕಾರಿ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಅವರನ್ನು ಒತ್ತಾಯಿಸಿದ್ದಾರೆ.
ಯಾವುದೇ ರಾಜಕೀಯ ಪ್ರಭಾವಕ್ಕೆ ಒಳಗಾಗದೆ ಸರ್ಕಾರದ ಹಣವನ್ನು ದುರುಪಯೋಗವಾಗದಂತೆ ನಿಗಾವಹಿಸಬೇಕೆಂದು ಬಳಗಾನೂರು ಗ್ರಾಮದ ಪಂಪನಗೌಡ, ಶಿವರೆಡ್ಡೆಪ್ಪ ವಾಲೇಕಾರ, ನಿಂಗಪ್ಪ, ಕರೆಯಪ್ಪ ಉದ್ಬಾಳ, ಈಶಪ್ಪ ತುರ್ವಿಹಾಳ, ಸಿದ್ದಪ್ಪ ಮಾಕಾಪುರ, ಅಮರಪ್ಪ ಲಕೋಜಿ ಸೇರಿದಂತೆ ನೂರಾರು ಜನರು ಪೂರ್ಣಗೊಳ್ಳದ ಕೆರೆ ನಿರ್ಮಾಣಕ್ಕೆ ಹಣ ಪಡೆಯುವ ಗುತ್ತಿಗೆದಾರರ ಉದ್ದೇಶವನ್ನು ಈಡೇರಿಸದಂತೆ ಮನವಿ ಮಾಡಿದ್ದಾರೆ.