ಶಿಕಾರಿಪುರ: ರಾಜ್ಯ ಸರ್ಕಾರಕ್ಕೆ ಒತ್ತಾಯ ಮಾಡುವ ಮೂಲಕ ಸಚಿವ ಸಂಪುಟ ಸದಸ್ಯರೊಂದಿಗೆ ಚರ್ಚೆ ಮಾಡಿ ಸಮುದಾಯ ಕೆರೆ ಯೋಜನೆ ಮುಂದುವರಿಯಲು ಪ್ರಯತ್ನ ನಡೆಸುತ್ತೇನೆ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹೇಳಿದರು.
ಪಟ್ಟಣದ ಮಂಗಳಭವನದಲ್ಲಿ ಮಂಗಳವಾರ ಜಲಸಂಪನ್ಮೂಲ ಇಲಾಖೆ (ಸಣ್ಣ ನೀರಾವರಿ), ಜಲಸಂವರ್ಧನಾ ಯೋಜನಾ ಸಂಘ, ಜಿಲ್ಲಾ ಯೋಜನಾ ಘಟಕ, ಕರ್ನಾಟಕ ಸಮುದಾಯ ಆಧಾರಿತ ಕೆರೆ ನಿರ್ವಹಣೆ ಯೋಜನೆ, ಶರಾವತಿ ಬಳಕೆದಾರರ ಸಂಘಗಳ ಜಿಲ್ಲಾ ಒಕ್ಕೂಟ ಆಶ್ರಯದಲ್ಲಿ ಸಮುದಾಯ ಕೆರೆ ನಿರ್ವಹಣೆ ಹಸ್ತಾಂತರ ಮತ್ತು ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.
ವಿಶ್ವದ ಜಪಾನ್ ಹಾಗೂ ಎಡಿಬಿ ಬ್ಯಾಂಕ್ಗಳು ಸೊನ್ನೆ ರಿಯಾಯ್ತಿ ಬಡ್ಡಿ ದರದಲ್ಲಿ ಈ ಯೋಜನೆ ಮೂಲಕ ಪ್ರಸ್ತುತ 3,700 ಕೆರೆ ಎತ್ತಿಕೊಳ್ಳಲು ರೂ.650 ಕೋಟಿ ಸಾಲ ಕೊಡಲು ಸಿದ್ಧವಿದ್ದು, ಸರ್ಕಾರದ ನೀರಾವರಿ ಸಚಿವರ ಜತೆ ಚರ್ಚಿಸಿ ಸರ್ಕಾರ ಸಾಲ ಪಡೆದು ಯೋಜನೆ ಮುಂದುವರಿಸಲು ಒತ್ತಾಯಿಸುತ್ತೇನೆ ಎಂದು ಹೇಳಿದರು. ಮಾಜಿ ಸಚಿವ ಹರತಾಳು ಹಾಲಪ್ಪ ಮಾತನಾಡಿ, ದಂಡಾವತಿ ಯೋಜನೆ ಆಗಬೇಕು ಎಂದರು.
ಕಾರ್ಯಕ್ರಮದಲ್ಲಿ ಸಂಸತ್ ಸದಸ್ಯ ಬಿ.ವೈ. ರಾಘವೇಂದ್ರ, ರಾಜ್ಯಸಭಾ ಸದಸ್ಯ ಆಯನೂರು ಮಂಜುನಾಥ್, ಶಾಸಕರಾದ ಆರ್.ಕೆ. ಸಿದ್ದರಾಮಣ್ಣ, ಭಾರತಿ ಶೆಟ್ಟಿ, ಎಂ.ಪಿ. ಕುಮಾರಸ್ವಾಮಿ, ಕರ್ನಾಟಕ ರಾಜ್ಯ ಉರ್ದು ಅಕಾಡೆಮಿ ಅಧ್ಯಕ್ಷ ಅಮ್ಜದ್ ಹುಸೇನ್ ಕರ್ನಾಟಕಿ, ರಾಜ್ಯ ಕೈಗಾರಿಕಾ ಅಭಿವೃದ್ಧಿ ಮಹಾ ಮಂಡಳಿ ಉಪಾಧ್ಯಕ್ಷ ಚೂಡಾನಾಯ್ಕ, ಜಿಲ್ಲಾಧಿಕಾರಿ ಎಂ.ವಿ. ವೇದಮೂರ್ತಿ, ತಾ.ಪಂ. ಅಧ್ಯಕ್ಷೆ ಜ್ಯೋತಿ ರಮೇಶ್, ಕರ್ನಾಟಕ ಕೆರೆ ಬಳಕೆದಾರರ ಸಂಘಗಳ ರಾಜ್ಯ ಒಕ್ಕೂಟದ ಅಧ್ಯಕ್ಷ ಕುಮಾರ್ ಗೌಡ್ರು ಉಪಸ್ಥಿತರಿದ್ದರು.