ಮಹಾಲಿಂಗಪುರ: ನಗರದ ಕೆರೆ ವಿಶಾಲವಾಗಿದ್ದು, ನದಿ ಇಲ್ಲವೇ ಕಾಲುವೆಯ ಮುಖಾಂತರ ನೀರು ಹರಿಸಿ ತುಂಬಿಸುವುದರಿಂದ ಕೊಳವೆ ಭಾವಿಗಳು ಮರು ಪೂರಣ ಹೊಂದುವ ಜೊತೆಗೆ ನೀರಿನ ಹಾಹಾಕಾರ ತಗ್ಗಲಿದೆ ಎಂದು ಸರಕಾರದ ಮುಖ್ಯ ಸಚೇತಕ ಸಿದ್ದು ಸವದಿ ಅಭಿಪ್ರಾಯ ಪಟ್ಟರು.
ನಗರದ ಕೆರೆಗೆ ನದಿ ನೀರಿನ ಮರು ಪೂರಣ ಕಾರ್ಯವನ್ನು ವೀಕ್ಷಿಸಿ ಅವರು ಮಾತನಾಡಿದರು. ನೆರೆಯ ಘಟಪ್ರಭಾ ನದಿಯಿಂದ ಕೆರೆಗೆ ಪೈಪ್ ಲೈನ್ ಮೂಲಕ ನೀರು ಹಾಯಿಸುವ ವ್ಯವಸ್ಥೆಯನ್ನು ಪ್ರಶಂಸಿಸಿದ ಸಚೇತಕರು, ಆದಷ್ಟು ಬೇಗನೇ ಕೆರೆ ತುಂಬಿಸಿ ನಗರದ ಕುಡಿಯುವ ನೀರಿನ ಬವಣೆ ನೀಗಲಿ ಎಂದು ಅಧಿಕಾರಿಗಳಿಗೆ ಸೂಚಿಸಿದರು.
ಪುರಸಭೆ ಸದಸ್ಯರಾದ ಶೇಖರ ಅಂಗಡಿ, ಬಸವರಾಜ ರಾಯರ, ಭೀಮಶಿ ಗೌಂಡಿ, ಮಹಾಲಿಂಗ ಕುಳ್ಳೊಳ್ಳಿ, ಚನಬಸು ಹುರಕಡ್ಲಿ, ಮುಷ್ತಾಕ್ ಚಿಕ್ಕೋಡಿ, ಶಿವಲಿಂಗ ಘಂಟಿ, ಮನೋಹರ ಶಿರೋಳ, ಸಿದ್ದು ಶಿರೋಳ, ಎಂಜಿನಿಯರ್ ಪಠಾಣ ಉಪಸ್ಥಿತರಿದ್ದರು.