ಕೆಜಿಎಫ್: ನಗರದ ಮಸ್ಕಂನಲ್ಲಿ ಒತ್ತುವರಿಯಾಗಿರುವ ಗೌಡನಕೆರೆ ಮತ್ತು ಅದಕ್ಕೆ ನೀರು ಹರಿದುಬರುವ ರಾಜಕಾಲುವೆಯನ್ನು ಎಂಟು ದಿನಗಳಲ್ಲಿ ಸರ್ವೇ ಮಾಡಿ ವರದಿ ಸಲ್ಲಿಸುವಂತೆ ಜಿಲ್ಲಾಧಿಕಾರಿ ಡಿ.ಕೆ.ರವಿ ಆದೇಶಿಸಿದ್ದಾರೆ.
ನಗರದ ಗೌತಂನಗರಕ್ಕೆ ಭಾನುವಾರ ಭೇಟಿ ನೀಡಿದ ಸಂದರ್ಭದಲ್ಲಿ ಗೌಡನಕೆರೆಯನ್ನು ವೀಕ್ಷಿಸಿದ ಅವರು ಸರ್ವೇ ನಂಬರ್ 64ರಲ್ಲಿ ಇದ್ದ ಕೆರೆ ಸಂಪೂರ್ಣ ಮಾಯವಾಗಿದ್ದನ್ನು ಕಂಡು ಅವಾಕ್ಕಾದರು.
ಇತ್ತೀಚೆಗೆ ತಹಶೀಲ್ದಾರರು ತಮಗೆ ವರದಿ ನೀಡಿ, ಕೆರೆ ಒತ್ತುವರಿಯಾಗಿಲ್ಲ ಎಂದು ತಿಳಿಸಿದ್ದರು. ಆದರೆ ಇಲ್ಲಿ ಕೆರೆಯೇ ಕಾಣುತ್ತಿಲ್ಲವಲ್ಲ. ತಹಶೀಲ್ದಾರರಿಗೆ ಸ್ವಲ್ಪವೂ ವಿವೇಚನೆ ಬೇಡವೆ ಎಂದು ಖಾರವಾಗಿ ಕೇಳಿದರು.
ಕೆರೆ ಒತ್ತುವರಿಯಾಗಿದೆ ಎಂದು ತಾವು ಹೇಳಿದರೂ ತಹಶೀಲ್ದಾರರು ಕೇಳಲಿಲ್ಲ ಎಂದು ಸ್ಥಳದಲ್ಲಿ ಹಾಜರಿದ್ದ ನಾಡ ಕಚೇರಿ ಸಿಬ್ಬಂದಿ ತಮ್ಮ ಅಸಹಾಯಕತೆಯನ್ನು ವ್ಯಕ್ತಪಡಿಸಿದರು. ಪಕ್ಕದಲ್ಲಿಯೇ ಇರುವ ಲೇಔಟ್ಗೆ ಕೆರೆಯಲ್ಲಿ ದಾರಿಗೆ ಜಾಗವನ್ನು ನೀಡಿದ ಬಗ್ಗೆ ಕೆಜಿಎಫ್ ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತ ಭೀಮನೇಡಿ ಅವರನ್ನು ತರಾಟೆಗೆ ತೆಗೆದುಕೊಂಡರು.
ರಸ್ತೆಯನ್ನು ತೆರವುಗೊಳಿಸಿ, ಲೇಔಟ್ಗೆ ನೀಡಿದ್ದ ಅನುಮತಿಯನ್ನು ಮರುಪರಿಶೀಲಿಸುವಂತೆ ಸೂಚನೆ ನೀಡಿದರು. ಗೌಡನಕೆರೆ ಒತ್ತುವರಿಯಾಗಿರುವ ಬಗ್ಗೆ ತಹಶೀಲ್ದಾರರಿಗೆ ಹಲವಾರು ದೂರು ನೀಡಿದ್ದರೂ ಪ್ರಯೋಜನವಾಗಲಿಲ್ಲ. ನಂತರ ಲೋಕಾಯುಕ್ತರಿಗೆ ದೂರು ನೀಡಿದ ನಂತರ ತಹಶೀಲ್ದಾರರು ಕಠಿಣ ಕ್ರಮ ಕೈಗೊಳ್ಳುವ ಬದಲು ಒಂದೊಂದು ಬಾರಿ ಒಂದೊಂದು ವರದಿಯನ್ನು ಸರ್ಕಾರಕ್ಕೆ ಮತ್ತು ಲೋಕಾಯುಕ್ತಕ್ಕೆ ಸಲ್ಲಿಸಿದ್ದಾರೆ ಎಂದು ಗ್ರಾಮಸ್ಥರು ಜಿಲ್ಲಾಧಿಕಾರಿಗೆ ತಿಳಿಸಿದರು.
ಈ ಮುನ್ನ ಗೌಡನಕೆರೆಗೆ ನೀರು ಹರಿದುಬರುವ ರಾಜಕಾಲುವೆ ಗೌತಂನಗರದ ಬಳಿ ಇರುವ ಮುಖ್ಯ ರಸ್ತೆಯಲ್ಲಿ ಅತಿಕ್ರಮಿಸಿರುವುದನ್ನು ಜಿಲ್ಲಾಧಿಕಾರಿ ವೀಕ್ಷಿಸಿದರು. ರಾಜಕಾಲುವೆ ಮತ್ತು ಗೌಡನಕೆರೆ ಇರುವ ಪ್ರದೇಶವನ್ನು ಎಂಟು ದಿನಗಳೊಳಗೆ ಸರ್ವೇ ಮಾಡಿ ಸಂಪೂರ್ಣ ವರದಿಯನ್ನು ತಮಗೆ ಸಲ್ಲಿಸುವಂತೆ ಕಂದಾಯ ಇಲಾಖೆ ಸಿಬ್ಬಂದಿಗೆ ಸೂಚಿಸಿದರು.
ನಗರಸಭೆಯ ಕುವೆಂಪು ಬಸ್ನಿಲ್ದಾಣಕ್ಕೆ ಭೇಟಿ ನೀಡಿ, ಬಸ್ ನಿಲ್ದಾಣದ ಅವ್ಯವಸ್ಥೆಯನ್ನು ಪರಿಶೀಲಿಸಿದರು. ನಂತರ ಮಹಾತ್ಮಗಾಂಧಿ ಪ್ರತಿಮೆಯನ್ನು ಸ್ಥಳಾಂತರಿಸುವ ಜಾಗವನ್ನು ಸಹ ವೀಕ್ಷಿಸಿದರು.
ನಗರ ಹೊರವಲಯದ ಲಕ್ಷ್ಮೀಸಾಗರ ಕೆರೆ, ಊರಿಗಾಂಪೇಟೆ ರಾಜಕಾಲುವೆ ಒತ್ತುವರಿಯಾಗಿರುವ ಪ್ರದೇಶವನ್ನು ಅವರು ವೀಕ್ಷಿಸಿದರು.
ನಗರಸಭೆ ಆಯುಕ್ತ ಬಾಲಚಂದ್ರ, ಕೆಜಿಎಫ್ ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತ ಭೀಮನೇಡಿ, ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಶ್ರಿಧರ್, ಉಪತಹಶೀಲ್ದಾರ್ ವೆಂಕಟರಾಮಯ್ಯ , ಕಂದಾಯ ಸಹಾಯಕ ವಿಜಯದೇವ್ ಮತ್ತಿತರರಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.