ಬೆಂಗಳೂರು: `ನಗರದಲ್ಲಿ ಉಳಿದುಕೊಂಡಿರುವ ಕೆಲವೇ ಕೆರೆಗಳನ್ನು ರಕ್ಷಿಸಿಕೊಳ್ಳಬೇಕಾದ ಜವಾಬ್ದಾರಿ ನಗರದ ಎಲ್ಲಾ ನಾಗರಿಕರ ಮೇಲಿದೆ~ ಎಂದು ಬಿಬಿಎಂಪಿ ಸದಸ್ಯ ಡಾ.ಎಂ.ಎಸ್. ಶಿವಪ್ರಸಾದ್ ಹೇಳಿದರು.
ನಗರದಲ್ಲಿ ಭಾನುವಾರ ಸ್ಯಾಂಕಿ ಉದ್ಯಾನವನ ನಡಿಗೆದಾರರ ಸಂಘ ಆಯೋಜಿಸಿದ್ದ `ನಡಿಗೆದಾರರ ದಿನ~ದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.`ವಾತಾವರಣವನ್ನು ಸುಸ್ಥಿರವಾಗಿಡುವಲ್ಲಿ ಕೆರೆಗಳ ಪಾತ್ರ ಬಹಳ ಮುಖ್ಯವಾದುದು. ಆದರೆ ಬೆಂಗಳೂರು ನಗರ ಬೆಳೆದಂತೆ ಇಲ್ಲಿನ ಕೆರೆಗಳೆಲ್ಲ ಕಣ್ಮರೆಯಾಗಿವೆ. ವಿವಿಧ ಉದ್ದೇಶಗಳಿಗಾಗಿ ಕೆರೆಗಳನ್ನು ಮುಚ್ಚುತ್ತಾ ಬಂದು, ಇಂದು ನಗರದಲ್ಲಿ ಬೆರಳೆಣಿಕೆಯಷ್ಟು ಕೆರೆಗಳು ಮಾತ್ರ ಉಳಿದುಕೊಂಡಿವೆ~ ಎಂದು ಅವರು ಕಳವಳ ವ್ಯಕ್ತಪಡಿಸಿದರು.
ಸಂಘದ ಸದಸ್ಯ ವಿನೋದ್ ಕುಮಾರ್ ಮಾತನಾಡಿ, `6 ವರ್ಷಗಳ ಹಿಂದೆ ಸ್ಥಾಪನೆಯಾದ ಸ್ಯಾಂಕಿ ಕೆರೆ ನಡಿಗೆದಾರರ ಸಂಘ ಇಲ್ಲಿಯವರೆಗೂ ಪರಿಸರ ಕಾಳಜಿಯ ಅನೇಕ ಕೆಲಸಗಳನ್ನು ಮಾಡುತ್ತಾ ಬಂದಿದೆ. ಸ್ಯಾಂಕಿ ಕೆರೆಯಲ್ಲಿ ಸದ್ಯ 200 ಬಾತುಕೋಳಿಗಳನ್ನು ಬಿಡಲಾಗಿದೆ. ಕೆರೆಯ ಸೊಬಗನ್ನು ಹೆಚ್ಚಿಸಲು ವಿವಿಧ ಬಗೆಯ ದಾಸವಾಳದ ಹೂವಿನ ಗಿಡಗಳನ್ನು ನೆಡಲಾಗುವುದು~ ಎಂದು ತಿಳಿಸಿದರು.
ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ 72 ಜನ ನಡಿಗೆದಾರರಿಗೆ ಬಹುಮಾನ ನೀಡಲಾಯಿತು. ಮಲ್ಲೇಶ್ವರ 13ನೇ ಅಡ್ಡರಸ್ತೆ ಹಾಗೂ 5ನೇ ಅಡ್ಡರಸ್ತೆಯ ಸರ್ಕಾರಿ ಶಾಲೆಗಳ 300 ವಿದ್ಯಾರ್ಥಿಗಳಿಗೆ ಉಚಿತವಾಗಿ ಶಾಲಾ ಬ್ಯಾಗ್, ನೋಟ್ ಪುಸ್ತಕ, ಇನ್ನಿತರ ಪಠ್ಯ ಸಾಮಗ್ರಿಗಳನ್ನು ವಿತರಿಸಲಾಯಿತು. ಸಂಘದ ಸದಸ್ಯರಾದ ಬಿ.ಆರ್.ವಿಜಯ್ಕುಮಾರ್, ರಂಗರಾಜನ್ ಮತ್ತಿತರರು ಉಪಸ್ಥಿತರಿದ್ದರು.