ಮಹದೇವಪುರ: `ಬೆಂಗಳೂರು ನಿರ್ಮಾತೃ ಕೆಂಪೇಗೌಡರು ದೂರದೃಷ್ಟಿ ಇಟ್ಟುಕೊಂಡು ಪರಿಸರಸ್ನೇಹಿ ನಗರವನ್ನು ನಿರ್ಮಿಸಿದ್ದರು. ಆದರೆ ಪ್ರಸ್ತುತ ನಗರ ಅಭಿವೃದ್ಧಿಯ ಪಥದಲ್ಲಿ ಸಾಕಷ್ಟು ಸವಾಲುಗಳನ್ನು ಎದುರಿಸುತ್ತಿದೆ~ ಎಂದು ಮುಖ್ಯಮಂತ್ರಿ ಡಿ.ವಿ.ಸದಾನಂದಗೌಡ ಹೇಳಿದರು.
ಮಂಡೂರು ಗ್ರಾಮದಲ್ಲಿ ಇತ್ತೀಚೆಗೆ ನಡೆದ ಕೆಂಪೇಗೌಡರ 502ನೇ ಜಯಂತ್ಯುತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಕೆಂಪೇಗೌಡರು ನಗರದ ಸುತ್ತಮುತ್ತ ಕೆರೆಗಳನ್ನು ಸ್ಥಾಪಿಸಿ ಜಲಸಮೃದ್ದಿಗೆ ಮಹತ್ತರ ಯೋಜನೆಯನ್ನು ರೂಪಿಸಿದ್ದರು. ಇಂದು ನಗರದಲ್ಲಿ ಬಹುತೇಕ ಕೆರೆಗಳು ಒತ್ತುವರಿಗೊಂಡಿದೆ. ಆದಷ್ಟು ಬೇಗನೆ ಒತ್ತುವರಿಗೊಂಡ ಕೆರೆಗಳನ್ನು ತೆರವುಗೊಳಿಸಲಾಗುವುದು. ಎಲ್ಲಾ ಕೆರೆಗಳನ್ನು ಅಭಿವೃದ್ಧಿಪಡಿಸಲಾಗುವುದು~ ಎಂದು ಅವರು ಭರವಸೆ ನೀಡಿದರು.
`ವರ್ಷಕ್ಕೊಮ್ಮೆ ಕೆಂಪೇಗೌಡರ ದಿನಾಚರಣೆಯನ್ನು ಆಚರಿಸುವುದು ಮಾತ್ರವಲ್ಲ. ಅವರ ಆದರ್ಶಗಳನ್ನು ಜನಪ್ರತಿನಿಧಿಗಳು ಪಾಲಿಸಬೇಕು. ಅಂದಾಗ ಮಾತ್ರ ಸಮಾಜದಲ್ಲಿ ಪಾರದರ್ಶಕ ಆಡಳಿತವನ್ನು ತರಬಹುದು~ ಎಂದು ಸಲಹೆ ನೀಡಿದರು.
ನಿರ್ಮಲಾನಂದ ಸ್ವಾಮೀಜಿ, ಸಚಿವರಾದ ಬಿ.ಎನ್.ಬಚ್ಚೇಗೌಡ, ಆರ್.ಅಶೋಕ, ಶಾಸಕರಾದ ಅರವಿಂದ ಲಿಂಬಾವಳಿ, ಎನ್. ನಂದೀಶ ರೆಡ್ಡಿ ಇತರರು ಉಪಸ್ಥಿತರಿದ್ದರು.