ತಿ.ನರಸೀಪುರ: 7.5 ಕೋಟಿ ರೂಪಾಯಿಗಳ ವೆಚ್ಚದಲ್ಲಿ ತಾಲ್ಲೂಕಿನ ಪ್ರಮಖ ಕೆರೆಗಳ ಹೂಳೆತ್ತಿಸಿ ಅಭಿವೃದ್ಧಿ ಪಡಿಸಲಾಗುವುದು ಎಂದು ಶಾಸಕ ಡಾ.ಎಚ್.ಸಿ.ಮಹಾದೇವಪ್ಪ ತಿಳಿಸಿದರು.
ತಾಲ್ಲೂಕಿನ ಚಿದರಹಳ್ಳಿ ಗ್ರಾಮದಲ್ಲಿ ಹೊಸ ಕೆರೆ ಹೂಳೆತ್ತುವ ಕಾಮಗಾರಿಗೆ ಗುರುವಾರ ಚಾಲನೆ ನೀಡಿ ಮಾತನಾಡಿದ ಅವರು, ಸರ್ಕಾರ ನೀಡಿರುವ 5 ಕೋಟಿ ರೂಪಾಯಿ ಅನುದಾನದಲ್ಲಿ ಹೊಳೆತ್ತಲು ತಾಲ್ಲೂಕಿನ 13 ಕೆರೆಗಳನ್ನು ಸಮೀಕ್ಷೆ ಮಾಡಲಾಗಿದೆ.
ಚಿದರಹಳ್ಳಿಯ ಹಾಜ್ಕೆರೆ, ಮಾಲಂಗಿ, ಹೆಗ್ಗೂರು, ಕನ್ನನಾಯಕನಹಳ್ಳಿ, ಚಾಮನಹಳ್ಳಿ, ಹೊಸಕೊಪ್ಪಲು, ದೊಡ್ಡಮಲಗೂಡು ಕೆರೆಗಳ ನಿರ್ವಹಣೆಯನ್ನು ಜಿ.ಪಂ ತಾಂತ್ರಿಕ ವಿಭಾಗ ಮಾಡಲಿದೆ. ಚಿಮಿಲಿ, ಮಾರೇಗೌಡನಹಳ್ಳಿ, ಸೀಹಳ್ಳಿ, ಗೌಡನಗೆರೆ, ಬಾಣಗವಾಡಿ ಕೆರೆಗಳ ಕಾಮಗಾರಿಯನ್ನು ಕಾವೇರಿ ನಿರಾವರಿ ನಿಗಮ ಮಾಡಲಿದೆ. ಉಳಿದಂತೆ ಜಲ ಸಂಪನ್ಮೂಲ ಇಲಾಖೆಯಿಂದ 2.5 ಕೋಟಿ ವೆಚ್ಚದಲ್ಲಿ ನೆರಗ್ಯಾತನಹಳ್ಳಿ, ಹಲವಾರ, ಬೂದಹಳ್ಳಿ, ಕೆರೆಗಳ ಕಾಮಗಾರಿ ನಡೆಸಲಾಗುವುದು ಎಂದರು.
ಅಂತರ್ಜಲ ಪ್ರಮಾಣ ಕುಸಿತ, ಬೇಸಾಯಕ್ಕೆ ನೀರಿನ ತೊಂದರೆ, ಉದ್ಯಮ, ಕೈಗಾರಿಕೆಗಳಿಗೆ ನೀರಿನ ಕೊರತೆ ಕಂಡು ಬರುತ್ತಿರುವ ಹಿನ್ನೆಲೆಯಲ್ಲಿ ನೀರನ್ನು ಸಂಗ್ರಹಣೆ ಮಾಡುವ ದೃಷ್ಟಿಯಿಂದ ರಾಜ್ಯಾದ್ಯಂತ ಕೆರೆಗಳನ್ನು ಸ್ವಚ್ಛಗೊಳಿಸಿ ಅಭಿವೃದ್ಧಿ ಮಾಡಲು ಪ್ರತಿ ವಿಧಾನ ಸಭಾ ಕ್ಷೇತ್ರಕ್ಕೆ 5 ಕೋಟಿ ರೂಪಾಯಿಗಳನ್ನು ನೀಡಲಾಗುತ್ತಿದೆ. ಕಾವೇರಿ ನೀರಾವರಿ ನಿಗಮ ಹಾಗೂ ಜಲ ಸಂಪನ್ಮೂಲ ಇಲಾಖೆಯಿಂದಲೂ ಕೆರೆಗಳ ಹೊಳೆತ್ತಿಸಲಾಗುವುದು ಎಂದರು.
ಹಳ್ಳಿಗಳಲ್ಲಿ ಕುಡಿಯಲು ಹಾಗೂ ಬೇಸಾಯಕ್ಕೆ ನೀರಿನ ತೊಂದರೆ ಇದ್ದು, ನೀರಿನ ಬೇಡಿಕೆ ಹೆಚ್ಚಾಗಿದೆ. ಕೆರೆಗಳಲ್ಲಿ ಸಂಗ್ರಹಗೊಂಡ ನೀರನ್ನು ಕೊಳವೆ ಬಾವಿಗಳ ಮಾರ್ಗವಾಗಿ ಕೃಷಿ ಚಟುವಟಿಕೆಗಳಿಗೆ ಬಳಸುವ ಉದ್ದೇಶ ದಿಂದ ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಕೆರೆಗಳ ಹೂಳೆತ್ತುವ ಕಾಮಗಾರಿ ನಡೆಯಲಿದೆ ಎಂದರು.
ಇದೇ ಸಂದರ್ಭದಲ್ಲಿ ಚಿದರಹಳ್ಳಿ ಗ್ರಾಮಸ್ಥರು, ಎಸ್.ದೊಡ್ಡಪುರ ಬಳಿ ಇಒರುವ ಸ್ಮಶಾನ ದೂರಿವಿದ್ದು, ಹೋಗಿ ಬರಲು ತೊಂದರೆಯಾಗುತ್ತಿದೆ, ಹತ್ತಿರ ದಲ್ಲಿ ಎಲ್ಲಿಯಾದರೂ ಸ್ಮಶಾನಕ್ಕೆ ಭೂಮಿ ಕೊಡಿಸುವಂತೆ ಮನವಿ ಮಾಡಿದರು.
ತಾ.ಪಂ ಅಧ್ಯಕ್ಷೆ ಗಾಯಿತ್ರಿ, ಚಿದರಹಳ್ಳಿ ಗ್ರಾ.ಪಂ ಅಧ್ಯಕ್ಷ ಚಂದ್ರಶೇಖರ, ಮಾಜಿ ಅಧ್ಯಕ್ಷ ಚಿಕ್ಕಣ್ಣ, ಮುಖಂಡ ಸುನಿಲ್ ಬೋಸ್, ತಾ.ಪಂ ಮಾಜಿ ಅಧ್ಯಕ್ಷ ಮಲ್ಲಿಕಾರ್ಜುನಸ್ವಾಮಿ, ಸದಸ್ಯ ನಟರಾಜು, ಕಾಂಗ್ರೆಸ್ ಬ್ಲಾಕ್ ಅಧ್ಯಕ್ಷ ಟಿ.ಎಚ್.ಮಂಜುನಾಥ್, ಕೊಳ ತೂರು ಗ್ರಾ.ಪಂ ಅಧ್ಯಕ್ಷ ಸೋಮಣ್ಣ, ಜಿ.ಪಂ ಎಇಇ ಪುರುಷೋತ್ತಮ್, ನೀರಾವರಿ ನಿಗಮದ ಎಇಇ ಭರತ ರಾಜಯ್ಯ, ಮನಸೂರು ಆಲಿ, ಕುಮಾರ್, ಮಹೇಶ್ ಸೇರಿದಂತೆ ಹಲವಾರು ಅಧಿಕಾರಿಗಳು, ಮುಖಂಡರು ಹಾಜರಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.