ಬೆಂಗಳೂರು: ಗಣೇಶ ಮೂರ್ತಿಗಳ ವಿಸರ್ಜನೆ ಭರಾಟೆ ಪರಿಣಾಮ ನಗರದ ಕೆರೆಗಳಲ್ಲಿ ಹೆಚ್ಚಿನ ಪ್ರಮಾಣದ ರಾಸಾಯನಿಕ ಪತ್ತೆಯಾಗಿದೆ. ಕರ್ನಾಟಕ ರಾಜ್ಯ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ (ಕೆಎಸ್ಪಿಸಿಬಿ) ಸ್ಯಾಂಕಿ, ಲಾಲ್ಬಾಗ್ ಮತ್ತು ಶಿವಪುರ ಕೆರೆಗಳಲ್ಲಿ ನಡೆಸಿದ ಅಧ್ಯಯನದಿಂದ ಈ ಅಂಶ ಬೆಳಕಿಗೆ ಬಂದಿದೆ.
ಸ್ಯಾಂಕಿ ಕೆರೆಯಲ್ಲಿ ಮೂರ್ತಿಗಳ ವಿಸರ್ಜನೆಗಾಗಿಯೇ ನಿರ್ಮಿಸಿದ ಕಲ್ಯಾಣಿ ನೀರು, ದಂಡೆ ಮೇಲೆಯೇ ಓಡಾಡದಂತೆ ದುರ್ವಾಸನೆ ಬೀರುತ್ತಿತ್ತು. ಮೋಟರ್ ಮೂಲಕ ಆ ನೀರನ್ನು ಎತ್ತಿ ಪಕ್ಕದಲ್ಲಿದ್ದ ಮ್ಯಾನ್ಹೋಲ್ಗೆ ಹರಿಸಲಾಯಿತು. ಗಣೇಶನ ಮೂರ್ತಿಗಳಿಗೆ ಬಳಿದ ಬಣ್ಣದ ರಾಸಾಯನಿಕವೇ ಈ ತೊಂದರೆಗೆ ಕಾರಣವಾಗಿದೆ.
ಕೆಎಸ್ಪಿಸಿಬಿ ಸೇರಿದಂತೆ ಹಲವು ಸಂಸ್ಥೆಗಳು ಬಣ್ಣರಹಿತ ಪರಿಸರಸ್ನೇಹಿ ಗಣೇಶನ ವಿಗ್ರಹಗಳನ್ನು ಪ್ರತಿಷ್ಠಾಪಿಸುವಂತೆ ಜಾಗೃತಿ ಆಂದೋಲನ ನಡೆಸಿದರೂ ಹೆಚ್ಚಿನ ಜನ ಬಣ್ಣದ ಮೂರ್ತಿಗಳನ್ನೇ ಪೂಜಿಸಿ, ವಿಸರ್ಜಿಸುತ್ತಿದ್ದಾರೆ. ಸ್ಯಾಂಕಿ ನೀರಿಗೆ ಬಿಡಲಾದ ಸುಮಾರು 2 ಲಕ್ಷ ವಿಗ್ರಹಗಳಲ್ಲಿ ಶೇ 90ರಷ್ಟು ಬಣ್ಣದ ಮೂರ್ತಿಗಳೇ ಆಗಿದ್ದವು ಎಂದು ಬಿಬಿಎಂಪಿ ಸಿಬ್ಬಂದಿ ಹೇಳುತ್ತಾರೆ.
ಕೆರೆಗಳ ನೀರಿನಲ್ಲಿದ್ದ ಸೀಸ, ಪಾದರಸ, ಕಬ್ಬಿಣ, ಹಿತ್ತಾಳೆ, ನಿಕೆಲ್, ಕ್ರೋಮಿಯಂ ಮತ್ತು ಕ್ಯಾಡಿಮಿಯಂ ರಾಸಾಯನಿಕಗಳ ಪ್ರಮಾಣದಲ್ಲಿ ಗಣೇಶ ಮೂರ್ತಿಗಳ ವಿಸರ್ಜನೆಗೆ ಮುನ್ನ ಹಾಗೂ ನಂತರ ತುಂಬಾ ವ್ಯತ್ಯಾಸವಾಗಿದೆ. ಕಲುಷಿತಗೊಂಡ ನೀರಿನಿಂದ ಆಮ್ಲಜನಕ ಬಿಡುಗಡೆ ಪ್ರಮಾಣದಲ್ಲೂ ಏರು–ಪೇರಾಗಿದೆ ಎಂದು ಕೆಎಸ್ಪಿಸಿಬಿ ತಿಳಿಸಿದೆ.