ಸಂತೇಬೆನ್ನೂರು: ಕರ್ನಾಟಕ ಸರ್ಕಾರದ ಜಲ ಸಂವರ್ಧನೆ ಯೋಜನೆ ಅಡಿಯಲ್ಲಿ ಶ್ರೀ ಈಶ್ವರ ಕೆರೆ ಬಳಕೆದಾರರ ಸಂಘ ಸಂತೇಬೆನ್ನೂರಿನ ಕೆರೆ ಅಭಿವೃದ್ಧಿಗಾಗಿ ಒಂದು ವರ್ಷದಿಂದ ವಿವಿಧ ಕಾಮಗಾರಿ ಹಾಗೂ ಯೋಜನೆಗಳ ಮೂಲಕ ಕೆರೆಯ ಕಾಯಕಲ್ಪಕ್ಕೆ ಶ್ರಮಿಸುತ್ತಿದೆ.
ಕರ್ನಾಟಕ ಸಮುದಾಯ ಆಧಾರಿತ ಕೆರೆ ನಿರ್ವಹಣೆಯೋಜನೆಗೆ ಈ ಕೆರೆಯನ್ನು ಒಳಪಡಿಸಲಾಗಿದೆ. ವಿಶ್ವಬ್ಯಾಂಕ್ ನೆರವಿನಿಂದ ಅಭಿವೃದ್ದಿಗಾಗಿ ್ಙ 42 ಲಕ್ಷ ಮಂಜೂರು ಮಾಡಲಾಗಿದೆ.
ಇದರಲ್ಲಿ ್ಙ 36 ಲಕ್ಷ ಅನ್ನು ಕೆರೆ ಜಾಗದ ಸರ್ವೇ ಕಾರ್ಯ ನಡೆಸಿ ಬೌಂಡರಿ ಗುರುತಿಸಿ ಗುಂಡಿ ತೆಗೆಸಲು, ಕೆರೆಯಲ್ಲಿ ಬೆಳೆದ ಗಿಡ-ಗಂಟಿಗಳನ್ನು ಹಾಗೂ ಹೂಳು ತೆಗೆಸುವುದು, ಕೆರೆ ತೂಬುಗಳ ದುರಸ್ತಿ ಹಾಗೂ ಗೇಟ್ ಅಳವಡಿಸಲಾಗಿದೆ. ರಾಜ ಕಾಲುವೆ ಹೂಳೆತ್ತುವುದು, ಮೀನು ಕೃಷಿ ಹೊಂಡ, ಅಚ್ಚುಕಟ್ಟು ಪ್ರದೇಶದಲ್ಲಿ ಸಿಮೆಂಟ್ ಕಾಲುವೆ ನಿರ್ಮಾಣ ಹಾಗೂ ಕೆರೆ ಕೋಡಿ ದುರಸ್ತಿಗೆ ಬಳಸಲಾಗುತ್ತಿದೆ ಎಂದು ಕೆರೆ ಬಳಕೆದಾರರ ಸಂಘದ ಅಧ್ಯಕ್ಷ ಕೆ. ಮಾದಪ್ಪ ಮಾಹಿತಿ ನೀಡಿದರು.
ಈಗಾಗಲೇ ಶೇ. 30ರಷ್ಟು ಕಾಮಗಾರಿ ಪೂರ್ಣಗೊಂಡಿದ್ದು, ಉಳಿದ ಕಾಮಗಾರಿ ಪ್ರಗತಿಯಲ್ಲಿದೆ, ಸುಮಾರು 200 ಎಕರೆ ಕೆರೆಯ ವಿಸ್ತೀರ್ಣದಲ್ಲಿ ಶೇ. 30ರಿಂದ 40 ಭಾಗ ನೀರು ತುಂಬಿದ್ದು, ಉಳಿದ ಖಾಲಿ ಜಾಗದಲ್ಲಿ ಮರಗಿಡ ಬೆಳೆಸುಲು ಯೋಜನೆ ರೂಪಿಸಿದೆ. 150 ಎಕರೆಯಷ್ಟು ಜಮೀನು ಕೆರೆಯಿಂದ ನೀರಾವರಿ ಸೌಲಭ್ಯ ಪಡೆಯುತ್ತಿದೆ.
ಇದಲ್ಲದೇ ಬಾಕಿ ಉಳಿದ ಹಣದಲ್ಲಿ ಪರಿಸರ ಸಂರಕ್ಷಣೆಯ ಹೊಣೆಯಿಂದ ಕೆರೆಯ ಖಾಲಿ ಅಂಗಳದಲ್ಲಿ ಸುಮಾರು ಐದು ಸಾವಿರ ಸಸಿ ನೆಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಸ್ತ್ರೀಶಕ್ತಿ ಸಂಘದ ಮಹಿಳೆಯರಿಗೆ ಸ್ವಉದ್ಯೋಗಕ್ಕಾಗಿ ಧನ ಸಹಾಯ ನೀಡಲಾಗಿದೆ ಎಂದು ಉಪಾಧ್ಯಕ್ಷ ಜಿ. ಮಹೇಶ್ವರಪ್ಪ ತಿಳಿಸಿದರು.
ಕಾರ್ಯದರ್ಶಿಮಿರ್ಜಾ ಇಸ್ಮಾಯಿಲ್, ಖಜಾಂಜಿಯಾಗಿ ದಯಮ್ಮ ಸದಸ್ಯರಾದ ಪ್ರಕಾಶ್, ಸುಶೀಲಮ್ಮ, ಭಾಗ್ಯಲಕ್ಷ್ಮೀ ಕೆರೆ ಅಭಿವೃದ್ಧಿಯಲ್ಲಿ ಸಹಕರಿಸುತ್ತಿದ್ದಾರೆ ಎಂದರು.