ಬೆಂಗಳೂರು: ಕೆಂಪಾಂಬುದಿ ಕೆರೆಗೆ ಕೊಳಚೆ ನೀರು ಹರಿಯದಂತೆ ಕ್ರಮ ಕೈಗೊಳ್ಳುವಂತೆ ಪಾಲಿಕೆ ಆಯುಕ್ತರಾದ ಸಿದ್ದಯ್ಯ ಅವರು ವಲಯ ಮುಖ್ಯ ಎಂಜಿನಿಯರ್ಗೆ ಶುಕ್ರವಾರ ಸೂಚನೆ ನೀಡಿದ್ದಾರೆ.
ಕೆಂಪಾಂಬುದಿ ಮತ್ತು ಕರಿತಿಮ್ಮೇನಹಳ್ಳಿ ಕೆರೆಗಳ ತಪಾಸಣೆ ನಡೆಸಿದ ಅವರು `ಕೊಳಚೆ ನೀರನ್ನು ಬೇರೆಡೆಗೆ ಹರಿಸಲು ಅನುಕೂಲವಾಗುವಂತೆ ಕೈಗೊಂಡಿರುವ ಹದಿನೈದು ಮೀಟರ್ ಉದ್ದದ ಕಾಲುವೆ ನಿರ್ಮಾಣ ಕಾಮಗಾರಿಯನ್ನು ಶೀಘ್ರ ಪೂರ್ಣಗೊಳಿಸಿ. ಕೊಳಚೆ ನೀರು ಕೆರೆಗೆ ಹರಿಯದಂತೆ ಕ್ರಮ ಕೈಗೊಳ್ಳಿ. ಕೆಂಪಾಂಬುದಿ ಕೆರೆಯ ಪಕ್ಕದಲ್ಲಿರುವ ಪಾಲಿಕೆಗೆ ಸೇರಿದ ಐದು ಎಕರೆ ಜಾಗದಲ್ಲಿ ವಿವಿಧ ಜಾತಿಯ ಸಸಿ ನೆಟ್ಟು ಅಭಿವೃದ್ಧಿಪಡಿಸಿ~ ಎಂದು ತಾಕೀತು ಮಾಡಿದರು.
`ಕರಿತಿಮ್ಮೇನಹಳ್ಳಿ ಕೆರೆಯನ್ನು ಅಭಿವೃದ್ಧಿ ಮಾಡಿ ಮಳೆ ನೀರು ಕೆರೆಗೆ ಹರಿಯುವಂತೆ ನೋಡಿಕೊಳ್ಳಿ. ಮಳೆ ನೀರು ಕೆರೆಗೆ ಹರಿಯುವುದರಿಂದ ಸುತ್ತಲಿನ ತಗ್ಗು ಪ್ರದೇಶಗಳಿಗೆ ನೀರು ನುಗ್ಗುವುದಿಲ್ಲ. ಆದ್ದರಿಂದ ಕೂಡಲೇ ಕೆರೆಯ ಸರ್ವೆ ಕಾರ್ಯ ಆರಂಭಿಸಿ ತಂತಿ ಬೇಲಿ ನಿರ್ಮಿಸಿ~ ಎಂದರು. ಗಾಳಿ ಆಂಜನೇಯಸ್ವಾಮಿ ದೇವಸ್ಥಾನದ ಸಮೀಪ ವೃಷಭಾವತಿ ಕಾಲುವೆಯ ಹೂಳೆತ್ತುವ ಕಾರ್ಯದ ಪ್ರಗತಿ ಪರಿಶೀಲನೆಯನ್ನು ನಡೆಸಿದ ಅವರು, ಅಗತ್ಯ ಇರುವೆಡೆ ಹೂಳೆತ್ತುವ ಕಾರ್ಯವನ್ನು ಮುಂದುವರೆಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.