ಚಾಮರಾಜನಗರ: `ಕೆಲವು ಮಾಧ್ಯಮಗಳು ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ತೇಜೋವಧೆ ಮಾಡುವ ಕಾರ್ಯದಲ್ಲಿ ಮುಳುಗಿವೆ. ಅಂತಹ ಮಾಧ್ಯಮಗಳಲ್ಲಿ ಕೆಲಸ ಮಾಡುತ್ತಿರುವ ಪತ್ರಕರ್ತರು ಕಡು ಭ್ರಷ್ಟರಾಗಿದ್ದಾರೆ~ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಂ.ಪಿ. ರೇಣುಕಾಚಾರ್ಯ ಟೀಕಿಸಿದರು.
ನಗರದಲ್ಲಿ ಗುರುವಾರ ಪತ್ರಕರ್ತರೊಂದಿಗೆ ಮಾತನಾಡಿದ ಅವರು, `ರಾಜಕಾರಣಿಗಳ ಭ್ರಷ್ಟಾಚಾರದ ಬಗ್ಗೆ ಬೆಳಕು ಚೆಲ್ಲುವುದು ಮಾಧ್ಯಮಗಳ ಜವಾಬ್ದಾರಿಯಾಗಿದೆ. ಇದಕ್ಕೆ ನನ್ನ ಆಕ್ಷೇಪವಿಲ್ಲ. ಆದರೆ, ಮಾಧ್ಯಮ ರಂಗದಲ್ಲಿರುವ ಮಂದಿಯೂ ಪ್ರಾಮಾಣಿಕತೆಯಿಂದ ಇರಬೇಕು~ ಎಂದರು.
`ಕೆಲವು ಪತ್ರಕರ್ತರು ನೂರಾರು ಕೋಟಿ ಮೌಲ್ಯದ ಆಸ್ತಿ ಮಾಡಿಕೊಂಡಿದ್ದಾರೆ. ಅವರು ಕೂಡ ಭ್ರಷ್ಟಾಚಾರ ಎಸಗಿದ್ದಾರೆ. ಲೋಕಾಯುಕ್ತರ ಮುಂದೆ ಆಸ್ತಿ ಬಹಿರಂಗಪಡಿಸಿಕೊಳ್ಳಲು ಮುಂದಾಗಬೇಕು. ಆಗ ಕೋಟ್ಯಂತರ ರೂಪಾಯಿ ಮೌಲ್ಯದ ಅಕ್ರಮ ಆಸ್ತಿ ಎಲ್ಲಿಂದ ಬಂತೆಂದು ಜನರಿಗೆ ಗೊತ್ತಾಗುತ್ತದೆ~ ಎಂದು ವ್ಯಂಗ್ಯವಾಡಿದರು.