ಕೆಲಸದ ವೇಳೆ ಬದಲಾಯಿಸಿ
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಲಗ್ಗೆರೆಯಲ್ಲಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದವರು ನಾಗರಿಕ ವರ್ಗದವರ ಅನುಕೂಲಕ್ಕಾಗಿ ತಮ್ಮ ಶಾಖೆಯನ್ನು ಆರಂಭಿಸಿದ್ದಾರೆ. ಇದಕ್ಕೆ ಧನ್ಯವಾದಗಳು. ಆದರೆ ಈ ಶಾಖೆಯ ಕೆಲಸದ ವೇಳೆ 10.30 ರಿಂದ 4.30 ರವರೆಗೆ ಇರುತ್ತದೆ. ವಾರದ ರಜೆ ಭಾನುವಾರ.
ಲಗ್ಗೆರೆಯಲ್ಲಿ ಬಹುಪಾಲು ಮಧ್ಯಮ ಹಾಗೂ ಗಾರ್ಮೆಂಟ್ಸ್ ಉದ್ಯೋಗಿಗಳು ವಾಸ ಮಾಡಿಕೊಂಡಿದ್ದು ಪ್ರತಿದಿನ ಬೆಳಿಗ್ಗೆ 8 ಗಂಟೆಗೆ ಹೊರಟರೆ, ಮನೆ ತಲುಪುವುದು ಸಂಜೆಯೇ. ವಾರದ ರಜೆ ಭಾನುವಾರ ಆಗಿರುತ್ತದೆ. ಈ ಶಾಖೆಯಲ್ಲಿ ವ್ಯವಹರಿಸಲು ಅನಾನುಕೂಲವಾಗುತ್ತಿದೆ. ಭಾನುವಾರ ಅರ್ಧ ದಿವಸವಾದರೂ ಕಾರ್ಯ ನಿರ್ವಹಿಸುವಂತೆ ಸಮಯ ಬದಲಿಸಬಹುದೆ? ಉಳಿದ ದಿನ ಕೆಲಸದ ವೇಳೆಯನ್ನು ಬೆಳಿಗ್ಗೆ 9 ರಿಂದ 2.30 ರವರೆಗೆ ಕಾರ್ಯ ನಿರ್ವಹಿಸುವಂತೆ ಮಾಡಬಹುದು. ಈ ನಿಟ್ಟಿನಲ್ಲಿ ಕ್ರಮಕೈಗೊಳ್ಳಬಹುದೆ?
-ಜಿ. ಸಿದ್ದಗಂಗಯ್ಯ
ತೆರವುಗೊಳಿಸಿ
ಜಗಜೀವನರಾಂನಗರ (ದಕ್ಷಿಣ) ವಿಭಾಗದಲ್ಲಿರುವ ಪ್ರವೇಶ ದ್ವಾರದ ಮುಂದೆ ಬಿಬಿಎಂಪಿ ಗುತ್ತಿಗೆ ಕಾರ್ಮಿಕರು ಒಂದು ತಿಂಗಳಿನಿಂದ ಕಸ ತಂದು ಸುರಿಯುತ್ತಿದ್ದಾರೆ.
ಇದಕ್ಕೆ ಅಂಟಿಕೊಂಡಿರುವಂತೆಯೇ ನೀರಿನ ತೊಟ್ಟಿಯೂ ಇದೆ. ಸೊಳ್ಳೆ ಹಾವಳಿ ಹೆಚ್ಚುತ್ತಿದೆ. ಮಾಲಿನ್ಯವೂ ಹೆಚ್ಚಾಗಿದೆ. ದಯಮಾಡಿ ಕಸ ಸುರಿಯುವುದನ್ನು ಸ್ಥಳಾಂತರಿಸಬೇಕು ಎಂದು ಸಂಬಂಧಪಟ್ಟ ಇಲಾಖೆಯನ್ನು ವಿನಂತಿಸುತ್ತೇನೆ.
-ಸುಜಾತ. ಎಸ್. ರಾಯುಡು.
ಉದ್ಯಾನಕ್ಕೆ ನೀರು ಹಾಕಿ
ಜಯನಗರ ವಿಧಾನ ಸಭೆ ಕ್ಷೇತ್ರದಲ್ಲಿರುವ ಬಿ.ಬಿ.ಎಂ.ಪಿ. ಉದ್ಯಾನವನಗಳು ಒಣಗಿ ಹೋಗುತ್ತಿವೆ. ಜಯನಗರ 9ನೇ ಹಂತ ರಾಗಿ ಗುಡ್ಡ ಸ್ಲಂ ಎದುರು ಇರುವ ಪಾರ್ಕ್ಗೆ 3 ತಿಂಗಳಿನಿಂದ ನೀರು ಹಾಕುವವರಿಲ್ಲ. ಇದು ಸ್ಲಂ ಜನರ ಶೌಚಾಲಯವಾಗಿದೆ.
ಅಧಿಕಾರಿಗಳಿಗೆ ಮನವಿ ಮಾಡಿದ್ದರೂ ಕ್ರಮ ಕೈಗೊಳ್ಳುತ್ತಿಲ್ಲ. ಈ ಪಾರ್ಕ್ಗೆ 2 ಬೋರ್ವೆಲ್ ಹಾಕಿಸಲಾಗಿತ್ತು. ಆದರೆ ಯಾವುದೇ ಪ್ರಯೋಜನವಾಗಿಲ್ಲ. ಇದೇ ರೀತಿ ಜೆ. ಪಿ. ನಗರ 4ನೇ ಹಂತದ ಡಾಲರ್ ಕಾಲೋನಿಯಲ್ಲಿರುವ ಉದ್ಯಾನವನಕ್ಕೆ ಸುಮಾರು 70 ಲಕ್ಷ ಖರ್ಚು ಮಾಡಿ 3 ವರ್ಷದ ಹಿಂದೆ ಉದ್ಯಾನವನ ನಿರ್ಮಿಸಿರುತ್ತಾರೆ.
ಈ ಉದ್ಯಾನವನಕ್ಕೆ 3 ತಿಂಗಳಿನಿಂದ ನೀರು ಹಾಕುವವರು ಇಲ್ಲ. ಇಲ್ಲಿ ವಾಕಿಂಗ್ ಬರುವ ಹಿರಿಯ ನಾಗರೀಕರು, ಬಿ.ಬಿ.ಎಂ.ಪಿ. ಅಧಿಕಾರಿಗಳಿಗೆ, ತೋಟಗಾರಿಕೆ ಇಲಾಖೆ ಅಧ್ಯಕ್ಷರಿಗೆ ದೂರು ನೀಡಿದ್ದಾರೆ. ಯಾವುದೇ ಪ್ರಯೋಜನವಾಗಿಲ್ಲ. ಬೋರ್ವೆಲ್ ರಿಪೇರಿಯಾಗಿದೆ ಎಂದು ಸುಳ್ಳು ಹೇಳುತ್ತಾರೆ. ಈ ಬಗ್ಗೆ ಕೂಡಲೇ ಕ್ರಮ ಕೈಗೊಂಡರೆ ಬೇಸಿಗೆಯಲ್ಲಿ ಹಸಿರು ಉಳಿದೀತು.
- ಶೆಲತಿ ಎಸ್. ರಾವ್
ಯಾರು ಹೊಣೆ?
ಬಿ.ಬಿ.ಎಂ.ಪಿ. 2ನೇ ವಾರ್ಡ್ ಪುಟ್ಟೇನಹಳ್ಳಿ 11ನೇ ಡಿಪೋ ಎದುರು ಆಂಜನೇಯ ದೇವಾಲಯದ ಹತ್ತಿರ ರಸ್ತೆಯ ಪಕ್ಕ ಪಾದಚಾರಿಗಳು ಓಡಾಡುವ ಮೋರಿಯ ಮೇಲಿನ ಕಲ್ಲುಗಳು ಕಿತ್ತು ಹೋಗಿವೆ. ಯಾವ ಕಡೆ ನಡೆಯಬೇಕೆಂದು ತಿಳಿಯುವುದಿಲ್ಲ. ಕಂಬಿಯ ಜೊತೆ ಕಾಂಕ್ರಿಟ್ ಸರಿಯಾದ ಪ್ರಮಾಣದಲ್ಲಿ ಹಾಕಿಲ್ಲ.
ಇಂಥ ಕಾಮಗಾರಿಯಿಂದಾಗಿ ಬಿಬಿಎಂಪಿಗೆ ಕೆಟ್ಟ ಹೆಸರು ಬರುತ್ತಿದೆ. ಇದನ್ನು ಅದೇ ಗುತ್ತಿಗೆದಾರರಿಂದ ದುರಸ್ತಿ ಮಾಡಿಸಿ, ಕಳಪೆ ಕಾಮಗಾರಿಗೆ ದಂಡ ವಸೂಲಿ ಮಾಡಿಸಬೇಕು. ಮುಂದೆ ಅವರಿಗೆ ಯಾವುದೇ ಕಾಮಗಾರಿ ವಹಿಸದೆ ಶಿಕ್ಷೆ ವಿಧಿಸಬೇಕು. ಸಂಬಂಧಿಸಿದವರು ಕ್ರಮಕೈಗೊಳ್ಳಲು ಮನವಿ.
- ನೊಂದ ಪಾದಚಾರಿ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.