ಗಂಗಾವತಿ: ನಗರದ ಸರ್ಕಾರಿ ಜೂನಿಯರ್ ಕಾಲೇಜಿನಲ್ಲಿ ದ್ವಿತೀಯ ಪಿಯುಸಿಯ ಪೂರಕ ಪರೀಕ್ಷಾ ಕೇಂದ್ರ ಸ್ಥಾಪಿಸಲಾಗಿದೆ. ಒಂದು ಕೇಂದ್ರದಲ್ಲಿ ಗಜಗಾತ್ರದ 1623 ಅಭ್ಯರ್ಥಿಗಳು ಪರೀಕ್ಷೆ ಬರೆಯುತ್ತಿರುವುದರಿಂದ ಕೇಂದ್ರ ಅವ್ಯವಸ್ಥೆಯ ಆಗರವಾಗಿದೆ.
ಕಳೆದ ಏಪ್ರಿಲ್ನಲ್ಲಿ ನಡೆದ ವಾರ್ಷಿಕ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಅನುತ್ತೀರ್ಣರಾದ ವಿದ್ಯಾರ್ಥಿಗಳಿಗೆ ಇದೀಗ ಪೂರಕ ಪರೀಕ್ಷೆ (ಸಪ್ಲಿಮೆಂಟರಿ) ನಡೆಯುತ್ತಿವೆ. ತಾಲ್ಲೂಕಿನ 23 ಕಾಲೇಜಿನ ವಿದ್ಯಾರ್ಥಿಗಳಿಗೆ ಗಂಗಾವತಿಯಲ್ಲಿ ಕೇವಲ ಒಂದು ಪರೀಕ್ಷಾ ಕೇಂದ್ರ ಸ್ಥಾಪಿಸಲಾಗಿದೆ.
ಪರೀಕ್ಷಾ ಕೇಂದ್ರಕ್ಕೆ ತಾಲ್ಲೂಕಿನ 23 ಕಾಲೇಜಿನ ವಿದ್ಯಾರ್ಥಿಗಳು ಸಾಲದು ಎಂಬಂತೆ ಬಳ್ಳಾರಿ ಜಿಲ್ಲೆಯ ಎಮ್ಮಿಗೆನೂರು ಒಂದು ಹಾಗೂ ಕಂಪ್ಲಿಯ ಎರಡು ಕಾಲೇಜಿನ ವಿದ್ಯಾರ್ಥಿಗಳನ್ನು ಶಿಕ್ಷಣ ಇಲಾಖೆಯು ಗಂಗಾವತಿಯ ಕೇಂದ್ರಕ್ಕೆ ಸೇರಿಸಿರುವುದು ಮತ್ತಷ್ಟು ಸಮಸ್ಯೆಯಾಗಿದೆ.
ಕಾಲೇಜಿನ 23 ಕೊಠಡಿ: ಪಿಯುಸಿ ಪೂರಕ ಪರೀಕ್ಷಾ ಕೇಂದ್ರವಾದ ಸರ್ಕಾರಿ ಜೂನಿಯರ್ ಕಾಲೇಜಿನಲ್ಲಿ ಮಕ್ಕಳ ಸಂಖ್ಯೆಗೆ ತಕ್ಕಷ್ಟು ಕೊಠಡಿ ಲಭ್ಯವಿಲ್ಲದ್ದರಿಂದ ಪಕ್ಕದ ಮಾಂತಗೊಂಡ ನೀಲಮ್ಮ ಮೂಕಪ್ಪ ಸರ್ಕಾರಿ ಪದವಿ ಪೂರ್ವ ಕಾಲೇಜನ್ನು ಬಳಸಿಕೊಳ್ಳಲಾಗುತ್ತಿದೆ.
ಸರ್ಕಾರಿ ಜೂನಿಯರ್ ಕಾಲೇಜಿನ 15 ಮತ್ತು ಮಾಂತಗೊಂಡ ಕಾಲೇಜಿನ 8 ಕೊಠಡಿ, ಪರೀಕ್ಷೆಗೆ ಒಟ್ಟು 23 ಕೊಠಡಿಗಳನ್ನು ಬಳಸಿ ಕೊಳ್ಳಲಾಗುತ್ತಿದೆ.
ಪರೀಕ್ಷಾ ಚಟುವಟಿಕೆಗೆ 40 ಸಿಬ್ಬಂದಿಯನ್ನು ನಿಯೋಜಿಸಲಾಗಿದೆ ಎಂದು ಅಧಿಕಾರಿಕ ಮೂಲಗಳು `ಪ್ರಜಾವಾಣಿ~ಗೆ ತಿಳಿಸಿದೆ.
906 ಅಭ್ಯರ್ಥಿಗಳು: ಸೋಮವಾರ ನಡೆದ ಇಂಗ್ಲೀಷ್ ಪರೀಕ್ಷೆಗೆ 906 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾದರು. ಅದಕ್ಕೂ ಮೊದಲು ಶನಿವಾರ ನಡೆದ ಅರ್ಥಶಾಸ್ತ್ರ ಮತ್ತು ಗಣಿತ ವಿಷಯಕ್ಕೆ ಕ್ರಮವಾಗಿ 616, 174 ಮಕ್ಕಳು ಹಾಜರಾಗಿದ್ದರು ಎಂದು ಪರೀಕ್ಷಾ ಕೇಂದ್ರದ ಮುಖ್ಯಸ್ಥ ಕೆ.ಎಚ್. ಅಂಗಡಿ ತಿಳಿಸಿದರು.
`ತಾಲ್ಲೂಕಿಗೆ ಮತ್ತೊಂದು ಪರೀಕ್ಷಾ ಕೇಂದ್ರ ಮಂಜೂರು ಮಾಡಬಹುದಿತ್ತು. ಆದರೆ ಕೇವಲ ಒಂದೇ ಕೇಂದ್ರ ನೀಡಿದ್ದರಿಂದ ಪರೀಕ್ಷೆಗೆ ನಿಯೋಜನೆಗೊಂಡ ಸಿಬ್ಬಂದಿಗೆ ಆಡಳಿತಾತ್ಮಕ ಸಮಸ್ಯೆ ಎದುರಾಗಿದೆ~ ಎಂದು ಉಪನ್ಯಾಸಕರೊಬ್ಬರು ಅಸಮಾಧಾನ ವ್ಯಕ್ತಪಡಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.