ಮೊಳಕಾಲ್ಮುರು: ಉನ್ನತ ಶಿಕ್ಷಣ ಪ್ರವೇಶಕ್ಕೆ ರಾಜ್ಯಸರ್ಕಾರಿ ನೌಕರರ ಮಕ್ಕಳು ಅರ್ಜಿ ಸಲ್ಲಿಸುವಾಗ ಕೇಂದ್ರ ಮಾದರಿ ವೇತನ ಪ್ರಮಾಣ ನಿಗದಿಗೆ ಕ್ರಮ ಕೈಗೊಳ್ಳಬೇಕು ಎಂದು ವಿಧಾನ ಪರಿಷತ್ ಸದಸ್ಯ ವೈ.ಎ. ನಾರಾಯಣಸ್ವಾಮಿ ಆಗ್ರಹಿಸಿದರು.
ರಾಜ್ಯ ಸರ್ಕಾರಿ ನೌಕರರ ಮಕ್ಕಳು ಉನ್ನತ ಶಿಕ್ಷಣಕ್ಕೆ ಪ್ರವೇಶ ಪಡೆಯುವಾಗ ಪೋಷಕರ ವೇತನ ವಾರ್ಷಿಕ ರೂ 2ಲಕ್ಷ ದಾಟಿದಲ್ಲಿ ಕೆಲ ಸೌಲಭ್ಯಗಳನ್ನು ಕಳೆದುಕೊಳ್ಳಬೇಕಾಗಿದೆ. ಇದಕ್ಕೆ ರಾಜ್ಯಸರ್ಕಾರ ವೇತನ ನಿಗದಿ ಮಾಡಿರುವುದು ಕಾರಣವಾಗಿದೆ. ಇದು ಕೇಂದ್ರಸರ್ಕಾರಿ ನೌಕರರ ಮಕ್ಕಳಿಗೆ ರೂ 4ಲಕ್ಷವರೆಗೆ ಅನ್ವಯವಾಗುವುದಿಲ್ಲ ಎಂದು ಶುಕ್ರವಾರ ಇಲ್ಲಿ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.
ಶಿಕ್ಷಕರಿಗೆ ನೀಡುವ ಆರೋಗ್ಯಭತ್ಯೆ ಬದಲಾಗಿ ಅವರಿಗೆ `ಆರೋಗ್ಯಕಾರ್ಡ್~ ನೀಡುವ ಯೋಜನೆ ಜಾರಿ ಮಾಡಬೇಕು. ಅನಾರೋಗ್ಯ ಪೀಡಿತರು ಸರ್ಕಾರ ಸೂಚಿಸುವ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯಲು ಅನುಕೂಲವಾಗುತ್ತದೆ ಎಂದು ಹೇಳಿದರು.
ಗ್ರಾಮೀಣ ಭಾಗದಲ್ಲಿ ಆಂಗ್ಲ ಮಾಧ್ಯಮ ಶಾಲೆಗಳನ್ನು ತೆರಯಲು ಸರ್ಕಾರ ಮುಂದಾಗಿರುವುದಕ್ಕೆ ಪರ-ವಿರೋಧ ವ್ಯಕ್ತವಾಗುತ್ತಿದ್ದು, ತಮ್ಮ ಅಭಿಪ್ರಾಯವೇನು ಎಂಬ ಪ್ರಶ್ನೆಗೆ ಇದಕ್ಕೆ ವಿರೋಧ ಮಾಡುವುದು ಸರಿಯಲ್ಲ ಎಂದು ಹೇಳಿದರು.