ಉಡುಪಿ: ಸಾಚಾರ್ ಮತ್ತು ರಂಗನಾಥ್ ಮಿಶ್ರಾ ವರದಿ, ಕೇಂದ್ರ ಸರ್ಕಾರ ಜನ ವಿರೋಧಿ ನೀತಿಯನ್ನು ವಿರೋಧಿಸಿ ಉಡುಪಿ ಜಿಲ್ಲಾ ಬಿಜೆಪಿ ಯುವಮೋರ್ಚಾ ವತಿಯಿಂದ ಸರ್ವಿಸ್ ಬಸ್ ನಿಲ್ದಾಣದ ಗಾಂಧಿ ಪ್ರತಿಮೆ ಮಂಗಳವಾರ ಎದುರು ಪ್ರತಿಭಟನೆ ನಡೆಯಿತು.ಜಿಲ್ಲಾ ಬಿಜೆಪಿ ಯುವಮೋರ್ಚಾದ ಅಧ್ಯಕ್ಷ ವಿಲಾಸ್ ನಾಯಕ್ ಮಾತನಾಡಿ,
`1947 ಮತ್ತು ಅದಕ್ಕಿಂದ ಹಿಂದೆ ಭಾರತದಲ್ಲಿ ಆಸ್ತಿಯನ್ನು ಹೊಂದಿದ್ದವರು ಬಳಿಕ ಪಾಕಿಸ್ತಾನ ಸೇರಿದಂತೆ ಬೇರೆ ದೇಶಕ್ಕೆ ವಲಸೆ ಹೋಗಿದ್ದರೆ, ಅವರಿಗೆ ಮರಳಿ ಅದೇ ಜಾಗವನ್ನು ನೀಡಬೇಕು ಎನ್ನುವ ಕಾನೂನನ್ನು ತರಲು ಕೇಂದ್ರದ ಯುಪಿಎ ಸರ್ಕಾರ ಪ್ರಯತ್ನಿಸುತ್ತಿದೆ. ನಮ್ಮ ದೇಶದ ನಾಗರಿಕರಿಗೆ ಭೂಮಿ ಸಿಗದ ಈ ಹೊತ್ತಿನಲ್ಲಿ, ದೇಶವೇ ಬೇಡ ಎಂದು ಹೋದವರಿಗೆ ಕೇಂದ್ರ ಸರ್ಕಾರ ಮರಳಿ ಭೂಮಿಯನ್ನು ನೀಡಲು ಕಾನೂನು ರೂಪಿಸುತ್ತಿರುವುದು ಸರಿಯಲ್ಲ~ ಎಂದರು.
`ನಮ್ಮನ್ನು ಆಳುವ ನಾಯಕರಿಗೆ ಕಿಂಚಿತ್ತೂ ದೂರದೃಷ್ಟಿಯಿಲ್ಲ. ದೇಶದ ನಾಗರಿಕರ ಬಗ್ಗೆ ಕಾಳಜಿಯಿಲ್ಲ. ಭ್ರಷ್ಟ ಯುಪಿಎ ಸರ್ಕಾರವನ್ನು ಕೆಳಗಿಳಿಸಿಯೇ ಬಿಜೆಪಿ ಯುವ ಮೋರ್ಚಾ ವಿರಮಿಸಲಿದೆ~ ಎಂದು ಹೇಳಿದರು.
`ಅಡ್ವಾಣಿಯವರ ರಥಯಾತ್ರೆಯನ್ನು ಬಿಜೆಪಿ ಯುವ ಮೋರ್ಚಾ ಬೆಂಬಲಿಸುತ್ತಿದೆ~ ಎಂದರು. ಪ್ರತಿಭಟನಾ ಸಭೆಯಲ್ಲಿ ನಗರಸಭಾ ಸದಸ್ಯ ಶ್ಯಾಂ ಪ್ರಸಾದ್ ಕುಡ್ವ , ಜಿಲ್ಲಾ ಪಂಚಾಯಿತಿ ಸದಸ್ಯೆ ಗೀತಾಂಜಲಿ ಸುವರ್ಣ, ಶಿವಪ್ರಸಾದ್ ಶೆಟ್ಟಿ ಮುಂತಾದವರು ಭಾಗವಹಿಸಿದ್ದರು.