ಚೆನ್ನೈ (ಪಿಟಿಐ): ಪೆಟ್ರೋಲ್ ಬೆಲೆ ಏರಿಕೆ ವಿಷಯದಲ್ಲಿ ಯುಪಿಎ ಮೈತ್ರಿಕೂಟದಿಂದ ಹೊರಬರಲು ಸಹ ಹಿಂಜರಿಯುವುದಿಲ್ಲ ಎಂದು ಬುಧವಾರ ಬೆದರಿಕೆಯ `ಬಾಂಬ್~ ಸಿಡಿಸಿದ್ದ ಡಿಎಂಕೆ ಮುಖ್ಯಸ್ಥ ಎಂ.ಕರುಣಾನಿಧಿ, ಕೆಲವೇ ಕ್ಷಣಗಳಲ್ಲಿ ವ್ಯತಿರಿಕ್ತ ಹೇಳಿಕೆ ನೀಡಿದ್ದಾರೆ.
`ರಾಷ್ಟ್ರಪತಿ ಚುನಾವಣೆಯ ಹಿನ್ನೆಲೆಯಲ್ಲಿ ಸರ್ಕಾರವನ್ನು ಅಸ್ಥಿರಗೊಳಿಸುವುದಿಲ್ಲ~ ಎಂದು ಸ್ಪಷ್ಟಪಡಿಸಿದ್ದಾರೆ.
ಪೆಟ್ರೋಲ್ ಬೆಲೆ ಏರಿಕೆಯನ್ನು ವಿರೋಧಿಸಿ ಪ್ರತಿಭಟನಾ ನಿರತ ಪಕ್ಷದ ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡಿದ ಕರುಣಾನಿಧಿ, `ಡಿಎಂಕೆ ಪಕ್ಷವು ಮೈತ್ರಿಕೂಟದಲ್ಲಿದೆ. ಜನರ ಮೇಲೆ ಪರಿಣಾಮ ಬೀರುವ ನೀತಿಗಳ ವಿರುದ್ಧ ದನಿ ಎತ್ತುವುದಕ್ಕೂ ಮೈತ್ರಿಗೂ ಏನೂ ಸಂಬಂಧವಿಲ್ಲ~ ಎಂದಿದ್ದರು.
`ಎನ್ಡಿಎ ಇರಲಿ, ವಿ.ಪಿ.ಸಿಂಗ್ ಸಂಪುಟವೇ ಇರಲಿ ಈ ಹಿಂದೆ ನಮ್ಮ ಪಕ್ಷವು ಮೈತ್ರಿಕೂಟದಿಂದ ನಿರ್ಗಮಿಸಲು ಹಿಂದುಮುಂದು ನೋಡಿರಲಿಲ್ಲ. ಮೂಲ ತತ್ವಗಳಿಗೆ ಧಕ್ಕೆಯಾದಾಗ, ಮೈತ್ರಿಕೂಟದಲ್ಲಿ ಇದ್ದುಕೊಂಡು ಒಂದು ಸಮಸ್ಯೆಯನ್ನು ಬಗೆಹರಿಸಲು ಸಾಧ್ಯವಿಲ್ಲದಿದ್ದಾಗ ನಾವು ವಿರೋಧ ಪಕ್ಷಗಳ ದನಿಗೆ ಸಾಥ್ ನೀಡಲು ಎಂದೂ ಹಿಂಜರಿಯುವುದಿಲ್ಲ~ ಎಂದ್ದ್ದಿದರು.
ತಾವು ಹಾಕಿದ ಬೆದರಿಕೆ ಬಾಂಬ್ ರಾಜಕೀಯ ಪ್ರಕ್ಷುಬ್ಧತೆಗೆ ದಾರಿ ಮಾಡಿಕೊಡಬಹುದಾದ ಭೀತಿಯಿಂದ ಕರುಣಾನಿಧಿ ತಮ್ಮ ಹೇಳಿಕೆಯನ್ನು ತಕ್ಷಣವೇ ಬದಲಾಯಿಸಿಕೊಂಡರು.
`ನಾನು ಹಾಗೆ ಹೇಳಿಲ್ಲ. ಭಿನ್ನಾಭಿಪ್ರಾಯ ಬಂದಾಗ ಮೈತ್ರಿಕೂಟದಿಂದ ನಿರ್ಗಮಿಸಿದ ಉದಾಹರಣೆಯನ್ನು ಹೇಳಿದ್ದೆನಷ್ಟೆ~ ಎಂದು ಸಮರ್ಥಿಸಿಕೊಂಡರು.
`ಇದು ರಾಷ್ಟ್ರಪತಿ ಚುನಾವಣೆ ಸಮಯ. ಹಾಗಾಗಿ ನಾವು ಈ ಸಂದರ್ಭದಲ್ಲಿ ಸರ್ಕಾರವನ್ನು ಸಂಕಷ್ಟಕ್ಕೆ ಸಿಲುಕಿಸುವುದಿಲ್ಲ. ಅಸಮಾಧಾನವಿದ್ದರೂ ಮೈತ್ರಿಕೂಟದಲ್ಲಿ ಉಳಿಯುತ್ತೇವೆ~ ಎಂದರು.
`ಬೆಲೆ ಏರಿಕೆ ವಿಷಯವನ್ನು ಪ್ರಧಾನಿ ಪರಾಮರ್ಶಿಸುತ್ತಿದ್ದಾರೆ. ಈ ನಿಟ್ಟಿನಲ್ಲಿ ಒಳ್ಳೆಯ ಸುದ್ದಿ ಕೇಳುವ ನಿರೀಕ್ಷೆಯಲ್ಲಿದ್ದೇನೆ. ಕೇಂದ್ರವು ನಮ್ಮ ಸಲಹೆಗಳನ್ನು ಗಣನೆಗೆ ತೆಗೆದುಕೊಳ್ಳಲಿದೆ~ ಎಂದವರು ನುಡಿದರು.
ಬೆಲೆ ಏರಿಕೆ ವಾಪಸ್ ಪಡೆಯದಿದ್ದರೆ ಬೆಂಬಲ ಹಿಂದಕ್ಕೆ ಪಡೆಯುವಿರಾ ಎಂಬ ಪ್ರಶ್ನೆಗೆ, `ಇದಕ್ಕೆ ಉತ್ತರಿಸಲಾಗದು, ಹೀಗೆ ಮಾಡಿದರೆ ಮುಂದೆ ಕೋಮು ಶಕ್ತಿಗಳು ಅಧಿಕಾರಕ್ಕೆ ಬಂದುಬಿಡುತ್ತವೆ~ ಎಂದರು.
ಈಗ ನಡೆಸುತ್ತಿರುವ ಪ್ರತಿಭಟನೆ ಬೆಲೆ ಏರಿಕೆಯ ವಿರುದ್ಧವೇ ಹೊರತು ಸರ್ಕಾರದ ವಿರುದ್ಧವಲ್ಲ ಎಂದೂ ಅವರು ಸ್ಪಷ್ಟಪಡಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.