ಬೆಂಗಳೂರು: ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ಹೂಡಲು ಅನುಮತಿ ನೀಡಿರುವುದಕ್ಕೆ ಕಾರಣಗಳನ್ನು ನೀಡಿ ರಾಜ್ಯಪಾಲ ಎಚ್.ಆರ್. ಭಾರದ್ವಾಜ್ ಅವರು ಕೇಂದ್ರ ಗೃಹ ಸಚಿವಾಲಯಕ್ಕೆ ವರದಿ ರವಾನಿಸಿದ್ದಾರೆ.
ಮುಖ್ಯಮಂತ್ರಿಗಳ ವಿರುದ್ಧ ಮೊಕದ್ದಮೆ ದಾಖಲಿಸಲು ಅನುಮತಿ ಕೋರಿದ್ದ ಇಬ್ಬರು ವಕೀಲರ ದೂರಿನ ಸತ್ಯಾಸತ್ಯತೆಯನ್ನು ಪರಿಶೀಲಿಸಲು ರಾಜ್ಯಪಾಲರು ಸರ್ಕಾರದಿಂದ 93 ದಾಖಲೆಗಳನ್ನು ಕೇಳಿದ್ದರು ಎಂದು ವರದಿಯಲ್ಲಿ ಹೇಳಲಾಗಿದೆ.
ಸರ್ಕಾರ 17 ದಿನಗಳ ಅವಧಿಯಲ್ಲಿ ಒಟ್ಟು 80 ದಾಖಲೆಗಳನ್ನು ಮಾತ್ರ ನೀಡಿದೆ ಎಂದು ವರದಿಯಲ್ಲಿ ರಾಜ್ಯಪಾಲರು ತಿಳಿಸಿದ್ದಾರೆ. ಇನ್ನುಳಿದ 13 ದಾಖಲೆಗಳನ್ನೂ ಅದೇ ವಕೀಲರು ಮಾಹಿತಿ ಹಕ್ಕು ಕಾಯ್ದೆಯಡಿ ಪಡೆದುಕೊಂಡು ರಾಜ್ಯಪಾಲರಿಗೆ ಸಲ್ಲಿಸಿದ್ದರು.
‘ಈ 93 ದಾಖಲೆಗಳನ್ನು ಪರಿಶೀಲಿಸಿಯೇ ಮುಖ್ಯಮಂತ್ರಿಗಳ ವಿರುದ್ಧ ದೂರು ದಾಖಲು ಮಾಡಲು ನಾನು ಅನುಮತಿ ನೀಡಿದ್ದೇನೆ’ ಎಂದು ರಾಜ್ಯಪಾಲರು ವರದಿಯಲ್ಲಿ ತಿಳಿಸಿದ್ದಾರೆ.