ನವದೆಹಲಿ: ಕಾವೇರಿ ನ್ಯಾಯಮಂಡಳಿಯ `ಐತೀರ್ಪು' ಅಧಿಸೂಚನೆ ಹೊರಡಿಸದೆ ಕೇಂದ್ರ ಸರ್ಕಾರ ಹೊಣೆಗಾರಿಕೆಯಿಂದ ನುಣುಚಿಕೊಳ್ಳುತ್ತಿದೆ ಎಂದು ತಮಿಳುನಾಡು ಮುಖ್ಯಮಂತ್ರಿ ಜೆ. ಜಯಲಲಿತಾ ಆರೋಪಿಸಿದ್ದಾರೆ.
ಪ್ರಧಾನಿ ಅಧ್ಯಕ್ಷತೆಯಲ್ಲಿ ಗುರುವಾರ ನಡೆದ ಎನ್ಡಿಸಿ ಸಭೆಯಲ್ಲಿ ಮಾತನಾಡಿದ ಜಯಾ, `ನ್ಯಾಯಮಂಡಳಿ ಐತೀರ್ಪು ಅಧಿಸೂಚನೆ ಪ್ರಕಟಿಸದೆ ಯುಪಿಎ ಸರ್ಕಾರ ಸಂವಿಧಾನಾತ್ಮಕ ಜವಾಬ್ದಾರಿಯಿಂದ ಜಾರಿಕೊಳ್ಳುತ್ತಿದೆ' ಎಂದು ದೂರಿದರು.
ಎನ್ಡಿಸಿ ಸಭೆಯಿಂದ ಅರ್ಧದಲ್ಲೇ ಹೊರ ನಡೆದ ತಮಿಳುನಾಡು ಮುಖ್ಯಮಂತ್ರಿ, `ಕಾವೇರಿ ನ್ಯಾಯಮಂಡಳಿ ಅಂತಿಮ ತೀರ್ಪು ಪ್ರಕಟಿಸದೆ ಕೇಂದ್ರ ಅನಗತ್ಯ ವಿಳಂಬ ಮಾಡುತ್ತಿದೆ. ಈ ಸಂಗತಿ ಬಗೆಗೆ ಕೇಂದ್ರದ ಗಮನ ಸೆಳೆಯಲು ನಮ್ಮ ಪಕ್ಷದ ಸಂಸದರು ಪ್ರಧಾನಿ ಭೇಟಿಗೆ ಸಮಯ ಕೇಳಿದ್ದಾರೆ. ಆದರೆ, ಅವರಿಗೆ ಸಮಯ ನೀಡಿಲ್ಲ' ಎಂದು ಅನಂತರ ಪತ್ರಕರ್ತರ ಜತೆ ಮಾತನಾಡುತ್ತಾ ಟೀಕಿಸಿದರು.