ನವದೆಹಲಿ (ಐಎಎನ್ಎಸ್) : ಆರ್ಥಿಕ ಸುಧಾರಣೆ ಹೆಸರಿನಲ್ಲಿ ಯುಪಿಎ ಸರ್ಕಾರ ದೇಶ ಮಾರಲು ಹೊರಟಿದೆ ಎಂದು ದೂರಿರುವ ತೃಣಮೂಲ ಕಾಂಗ್ರೆಸ್ ಮುಖ್ಯಸ್ಥೆ ಮಮತಾ ಬ್ಯಾನರ್ಜಿ, ಮುಂದಿನ ಸಂಸತ್ ಅಧಿವೇಶನದಲ್ಲಿ ಕೇಂದ್ರ ಸರ್ಕಾರದ ವಿರುದ್ಧ ಅವಿಶ್ವಾಸ ಗೊತ್ತುವಳಿ ಮಂಡಿಸುವುದಾಗಿ ಸೋಮವಾರ ಇಲ್ಲಿ ತಿಳಿಸಿದರು.
ಕೇಂದ್ರ ಸರ್ಕಾರದ ಆರ್ಥಿಕ ಸುಧಾರಣಾ ಕ್ರಮದ ನಿರ್ಧಾರಗಳನ್ನು ವಿರೋಧಿಸಿ, ಜಂತರ್ ಮಂತರ್ನಲ್ಲಿ ಮಾತನಾಡಿದ ಮಮತಾ ಬ್ಯಾನರ್ಜಿ ಅವರು, ಸರ್ಕಾರ ಸುಧಾರಣೆ ಹೆಸರಿನಲ್ಲಿ ಸಣ್ಣ ರೈತರ ಉದ್ಯೋಗವನ್ನು ಕಸಿದುಕೊಳ್ಳುವ ಮೂಲಕ ದೇಶವನ್ನು ಕೊಳ್ಳೆ ಹೊಡೆಯುತ್ತಿದೆ ಎಂದರು.
ಜನಸಾಮಾನ್ಯರ ಬದುಕುವ ಹಕ್ಕನ್ನು ಕಸಿದುಕೊಳ್ಳಲು ಯಾವುದೇ ಸರ್ಕಾರಕ್ಕೂ ಅಧಿಕಾರವಿಲ್ಲ. ಎಫ್ಡಿಐ ಮೂಲಕ ಕೇಂದ್ರ ಸರ್ಕಾರ ದೇಶವನ್ನು ಮಾರಲು ಹೊರಟಿದೆ. ಹೀಗಾದಲ್ಲಿ ಜನತೆ ನಿಮ್ಮನ್ನು ಹೊರದೂಡುತ್ತಾರೆ ಎಂದು ಎಚ್ಚರಿಕೆ ನೀಡಿದರು.
ಇದೇ ವೇಳೆ ಕೇಂದ್ರ ಸರ್ಕಾರದ ಜನ ವಿರೋಧಿ ನೀತಿ ಖಂಡಿಸಿ, ದೇಶವ್ಯಾಪಿ ಪ್ರತಿಭಟನೆ ನಡೆಸುವುದಾಗಿ ಟಿಎಂಸಿ ನಾಯಕಿ ಮಮತಾ ಬ್ಯಾನರ್ಜಿ ಹೇಳಿದರು. ನಾಳೆ ಹರಿಯಾಣಾದಲ್ಲಿ ಟಿಎಂಸಿ ಪ್ರತಿಭಟನೆ ನಡೆಸಲಿದೆ ಎಂದು ಮಮತಾ ತಿಳಿಸಿದರು.