ಶಹಾಪುರ: ಮಾರುಕಟ್ಟೆಯಲ್ಲಿ ಸೂಕ್ತ ಧಾರಣೆ ಸಿಗದೆ ಕಂಗಾಲಾಗುತ್ತಿರುವ ಅನ್ನದಾತನಿಗೆ ಶಾಶ್ವತ ಪರಿಹಾರವೆಂದರೆ ಸೂಕ್ತ ಬೆಂಬಲಬೆಲೆ ನಿಗದಿಪಡಿಸುವುದು. ಉದ್ಯಮಿಗಳಿಗೆ ನೀಡುವ ಸಬ್ಸಿಡಿಯಂತೆ ಕೃಷಿ ಕ್ಷೇತ್ರಕ್ಕೂ ಈ ಸೌಲಭ್ಯ ವಿಸ್ತರಿಸಬೇಕು. ರಾಜ್ಯ ಸರ್ಕಾರದ ಮಾದರಿಯಲ್ಲಿ ಕೇಂದ್ರವೂ ಪ್ರತ್ಯೇಕ ಕೃಷಿ ಬಜೆಟ್ ಮಂಡಿಸಬೇಕು ಎಂದು ಆಗ್ರಹಿಸಿ ತಾಲ್ಲೂಕು ಬಿಜೆಪಿ ರೈತಮೋರ್ಚಾದ ಕಾರ್ಯಕರ್ತರು ಆಗ್ರಹಿಸಿದರು.
ಈ ಸಂಬಂಧ ಪ್ರತಿಭಟನಾ ಮೆರವಣಿಗೆ ನಡೆಸಿ ತಹಸೀಲ್ದಾರರ ಮೂಲಕ ಸರ್ಕಾರಕ್ಕೆ ಮನವಿಪತ್ರ ಸಲ್ಲಿಸಲಾಯಿತು.“ರೈಲ್ವೆ ಬಜೆಟ್ ಕೇವಲ ಒಂದು ಇಲಾಖೆಗೆ ಸೀಮಿತ. ಆದರೆ ಇಡೀ ರೈತ ಸಮುದಾಯದ ಹಿತದೃಷ್ಟಿಯಿಂದ ಕೃಷಿ ಬಜೆಟ್ ಅತ್ಯಗತ್ಯ. ಕೇಂದ್ರ ದಿಟ್ಟ ಕ್ರಮವನ್ನು ತೆಗೆದುಕೊಂಡಾಗ ಮಾತ್ರ ರೈತ ಆತ್ಮಹತ್ಯೆಯ ವಿಷವರ್ತುಲದಿಂದ ಹೊರಬರಲು ಸಾಧ್ಯ” ಎಂದು ಬಿಜೆಪಿಯ ರೈತಮೋರ್ಚಾದ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಯಲ್ಲಯ್ಯ ನಾಯಕ ವನದುರ್ಗ ಹೇಳಿದರು.
ರೈತರಲ್ಲಿ ಸಣ್ಣ ಅತಿಸಣ್ಣ ರೈತರೆಂದು ತಾರತಮ್ಯ ನೀತಿ ಅನುಸರಿಸುವುದು ಸರಿಯಲ್ಲ. ನೀರಾವರಿ, ಹೈನುಗಾರಿಕೆ, ಹನಿ ನೀರಾವರಿಗೆ ಹೆಚ್ಚಿನ ಸೌಲಭ್ಯವನ್ನು ಒದಗಿಸಬೇಕು. ರಸಗೊಬ್ಬರದ ಬದಲಾಗಿ ಸಾವಯವ ಕೃಷಿಗೆ ಉತ್ತೇಜನ ನೀಡಲು ಕೃಷಿ ಬಜೆಟ್ನಲ್ಲಿ ಹೆಚ್ಚಿನ ಅನುದಾನ ಒದಗಿಸಬೇಕೆಂದು ರೈತಮೋರ್ಚಾದ ಮನವಿ ಮಾಡಿದರು.ಗಿರೆಪ್ಪಗೌಡ ಬಾಣತಿಹಾಳ, ರಾಜಶೇಖರ ಗೂಗಲ್,ನೀಲಕಂಠ ಬಡಿಗೇರ, ರಾಜುಗೌಡ ಉಕ್ಕನಾಳ, ಅಯ್ಯಣ್ಣ ಕನ್ಯಾಕೊಳ್ಳುರ, ಸಂತೋಷ ಗುತ್ತೇದಾರ,ಅಮರೇಶ ಅಂಗಡಿ ಮತ್ತಿತರರು ನೇತೃತ್ವ ವಹಿಸಿದ್ದರು.