ತುಮಕೂರು ಜಿಲ್ಲೆಯ ತಿಪಟೂರು, ತುರುವೇಕೆರೆ, ಕುಣಿಗಲ್, ಗುಬ್ಬಿ, ಚಿಕ್ಕ ನಾಯಕನಹಳ್ಳಿ ಹಾಗೂ ಶಿರಾ ತಾಲ್ಲೂಕು ಗಳಲ್ಲಿ ತೆಂಗು ಪ್ರಮುಖ ಬೆಳೆ. ಕಳೆದ ಎರಡು ವರ್ಷಗಳಿಂದ ಮುಂಗಾರು ಹಾಗೂ ಹಿಂಗಾರು ಮಳೆ ಕೈಕೊಟ್ಟಿದ್ದರಿಂದ ಜಿಲ್ಲೆಯಲ್ಲಿ ಲಕ್ಷಾಂತರ ಸಂಖ್ಯೆಯಲ್ಲಿ ತೆಂಗಿನ ಮರಗಳು ಸಂಪೂರ್ಣ ವಾಗಿ ಒಣಗಿವೆ.
ಒಂದೆಡೆ ತೆಂಗಿನಕಾಯಿಗೆ ನುಸಿಪೀಡೆ, ಗರಿಗೆ ಬೆಂಕಿ ರೋಗ. ಮತ್ತೊಂದೆಡೆ ಮಾರುಕಟ್ಟೆ ಯಲ್ಲಿ ತೆಂಗಿನಕಾಯಿಯನ್ನು ಕೇಳುವವರೇ ಇಲ್ಲ. ಮಳೆ ಇಲ್ಲದೇ, ಅಂತರ್ಜಲ ಕುಸಿತದಿಂದ ತೆಂಗಿನ ಗಿಡಗಳನ್ನು ಕಳೆದುಕೊಂಡಿರುವ ರೈತರ ಸ್ಥಿತಿ ಬೆಂಕಿಯಿಂದ ಬಾಣಲಿಗೆ ಬಿದ್ದಂತಾಗಿದೆ. ತೆಂಗಿನ ಮರ ಒಣಗಿರುವುದಕ್ಕೆ ಇದುವರೆವಿಗೂ ರಾಜ್ಯ ಸರ್ಕಾರದಿಂದ ಪರಿಹಾರ ಸಿಕ್ಕಿಲ್ಲ.
ಕೇರಳದಲ್ಲಿಯೂ ಇದೇ ರೀತಿ ತೆಂಗಿನ ಮರಗಳು ಒಣಗಿವೆ. ರೈತರ ಸಂಕಷ್ಟ ನಿವಾರಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಅಲ್ಲಿನ ರೈತರಿಗೆ ಪರಿಹಾರ ಘೋಷಿಸಿದೆ. ರಾಜ್ಯದ ರೈತರಿಗೂ ಅದೇ ರೀತಿ ಪರಿಹಾರ ನೀಡಬೇಕು. ಮರವೊಂದಕ್ಕೆ ಕನಿಷ್ಠ ರೂ 13 ಸಾವಿರ ಪರಿಹಾರ ನೀಡಬೇಕು. ತುಮಕೂರು ಜಿಲ್ಲಾ ಉಸ್ತುವಾರಿ ಸಚಿವರು ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಬೇಕು.
ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ತೋಟಗಾರಿಕಾಧಿಕಾರಿಗಳಿಗೆ ಆದೇಶಿಸಿ ಜಿಲ್ಲೆಯಲ್ಲಿ ಒಣಗಿರುವ ತೆಂಗಿನ ಮರಗಳ ತೋಟಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿ ಸರ್ಕಾರಕ್ಕೆ ವರದಿ ನೀಡುವಂತೆ ತಿಳಿಸಬೇಕು. ವರದಿ ಆಧಾರದ ಮೇಲೆ ಪರಿಹಾರ ದೊರಕಿಸಿ ಕೊಡಬೇಕು.