ಕಡೂರು: ಜಿಲ್ಲೆಯ ಮಲೆನಾಡಿನಲ್ಲಿ ಧಾರಾಕಾರವಾಗಿ ಮಳೆ ಸುರಿಯುತ್ತಿದ್ದರೆ ಇತ್ತ ಬಯಲು ಸೀಮೆಯ ಕಡೂರು ತಾಲ್ಲೂಕಿನ ರೈತರು ಮುಗಿಲನ್ನು ನೋಡುತ್ತಿದ್ದು ಬೆಳೆದ ಬೆಳೆಗೆ ಮಳೆ ಇಲ್ಲದೆ ತಲೆ ಮೇಲೆ ಕೈಹೊತ್ತು ಕುಳಿತಿದ್ದಾರೆ.
ಆರಂಭದಲ್ಲಿ ಅಲ್ಪ ಸ್ವಲ್ಪ ಬಿದ್ದ ಮಳೆ ನಂಬಿ ಬಿತ್ತನೆ ಮಾಡಿದ್ದೇ ತಪ್ಪಾಯಿತು ಎಂದು ಎಸ್.ಮಲ್ಲೇನಹಳ್ಳಿ ರೈತ ಮಲ್ಲೇಶಪ್ಪ ಹೂವಾಗಿರುವ ಎಳ್ಳು ಬೆಳೆಯನ್ನು ಕಂಡು ಮರುಗಿದರು. ಬೋರ್ವೆಲ್ ಇದ್ದಿದ್ದರೆ ನೀರು ಹಾಯಿಸಿ ಬೆಳೆ ಉಳಿಸಿಕೊಳ್ಳಬಹುದಿತ್ತು. ಆದರೆ ಏನು ಮಾಡಲಿ ಎಂಬುದೆ ತೋಚುತ್ತಿಲ್ಲ ಎಂದು ದುಃಖಿಸಿದರು.
ತಾಲ್ಲೂಕಿನ ಪಂಚನಹಳ್ಳಿ, ಸಿಂಗಟಗೆರೆ, ಎಮ್ಮೆದೊಡ್ಡಿ, ಗಿರಿಯಾಪುರ, ಹಿರೇನಲ್ಲೂರು, ಚೌಳಹಿರಿಯೂರು, ಮತಿಘಟ್ಟ, ಕೆ.ಬಿದರೆ ಯಳ್ಳಂಬಳಸೆ, ಯಗಟಿ ಸುತ್ತಮುತ್ತಲಿನ ರೈತರ ಸಮಸ್ಯೆ ಇದಕ್ಕೆ ಭಿನ್ನವಾಗಿಲ್ಲ ಬಿತ್ತನೆ ಬೀಜ, ಗೊಬ್ಬರ ಕೂಲಿ ಬೇಸಾಯಗಳಿಗೆಂದು ಹಣವನ್ನು ಹಾಕಿದ್ದು ಮೂರು ನಾಲ್ಕು ದಿನಗಳಲ್ಲಿ ಮಳೆ ಬಾರದೇ ಇದ್ದರೆ ಬೆಳೆಗಳೆಲ್ಲ ಹಾಳಾಗುತ್ತದೆ ಪ್ರತಿದಿನ ಮುಗಿಲನ್ನು ನೋಡುವುದೇ ಕಾಯಕವಾಗಿದೆ ಎಂದು 9 ನೇ ಮೈಲಿಕಲ್ಲಿನ ರೈತ ಕಲ್ಲೇಶಪ್ಪ ತಿಳಿಸಿದರು.