ಬೆಂಗಳೂರು: ದೇಶದ ಕೈಗಾರಿಕಾ ಪ್ರಗತಿ ಮಾರ್ಚ್ನಲ್ಲಿ ಶೇ. 3.5ಕ್ಕೆ ತಗ್ಗಿರುವ ಚಿತ್ರಣ ಅಭಿವೃದ್ಧಿಯ ಗತಿ ನಿದಾನವಾಗಿರುದರ ಸ್ಪಷ್ಟ ಸೂಚನೆ. ಇದು ಚಿಂತೆಗೀಡು ಮಾಡುವಂತಿದೆ ಎಂದು ಭಾರತೀಯ ರಿಸರ್ವ್ ಬ್ಯಾಂಕ್ ಡೆಪ್ಯುಟಿ ಗವರ್ನರ್ ಸುಬೀರ್ ಗೋಕರ್ಣ್ ಪ್ರತಿಕ್ರಿಯಿಸಿದರು.
ನಗರದಲ್ಲಿ ಶುಕ್ರವಾರ ಭಾರತೀಯ ಕೈಗಾರಿಕೋದ್ಯಮಗಳ ಒಕ್ಕೂಟ(ಸಿಐಐ)ದ ದಕ್ಷಿಣ ಭಾರತೀಯ ಪ್ರಾದೇಶಿಕ ಸಭೆಯ 2ನೇ ದಿನದ ಕಾರ್ಯಕ್ರಮದ ನಂತರ ಸುದ್ದಿಗಾರರ ಜತೆ ಮಾತನಾಡಿದ ಅವರು, ದೇಶದ ಪ್ರಗತಿಯ ಚಿತ್ರಣ ನೀಡುವಲ್ಲಿ ಮುಖ್ಯ ಸೂಚಿಯಾಗಿರುವ ಕೈಗಾರಿಕಾ ಕ್ಷೇತ್ರದಲ್ಲಿಯೇ ಬೆಳವಣಿಗೆ ಕುಂಠಿತವಾಗಿರುವುದು ಕೆಲವು ಸಮಯದಿಂದ ಕಳವಳಗೊಳ್ಳುವಂತೆ ಮಾಡಿದೆ ಎಂದರು.
ಖರೀದಿ ನಿರ್ವಹಣಾ ಸೂಚಿ(ಪರ್ಚೇಸಿಂಗ್ ಮ್ಯಾನೇಜರ್ಸ್ ಇಂಡೆಕ್ಸ್-ಪಿಎಂಐ), ನಮ್ಮದೇ ಆದ ಸಮೀಕ್ಷೆ ಮತ್ತು ಕಂಪೆನಿಗಳ ವಿಶ್ಲೇಷಣೆ ಸೇರಿದಂತೆ ಇನ್ನಷ್ಟು ಅಂಶಗಳನ್ನೂ ಪರಿಗಣಿಸಬೇಕಿದೆ. ಇವೆಲ್ಲವೂ ಪ್ರಗತಿಗತಿ ನಿದಾನವಾಗಿರುವುದರತ್ತಲೇ ಬೊಟ್ಟುಮಾಡುತ್ತವೆ ಎಂದರು.
2011ರ ನವೆಂಬರ್ನಲ್ಲಿ ಕೈಗಾರಿಕೆಗಳ ತಯಾರಿಕಾ ಪ್ರಮಾಣ ಶೇ 4.7ಕ್ಕೆ ಇಳಿದಿತ್ತು. ನಂತರ 2012ರ ಫೆಬ್ರುವರಿ ವೇಳೆಗೆ ಅದು ಇನ್ನಷ್ಟು ಕುಸಿದು ಶೇ 4.1ಕ್ಕೆ ಬಂದಿತ್ತು ಎಂದ ಅವರು, ಮುಂದಿನ ದಿನಗಳಲ್ಲಿ ಮತ್ತಷ್ಟು ಇಳಿಮುಖವಾಗುವ ಬಗ್ಗೆ ಈಗಲೇ ಏನನ್ನೂ ಹೇಳಲಾಗದು. ಅದಕ್ಕೂ ಮುನ್ನ ನಾವು ಒಮ್ಮೆ ಹಿನ್ನೋಟ ಹರಿಸಿ ಪರಿಸ್ಥಿತಿಯನ್ನು ಸರಿಯಾಗಿ ವಿಶ್ಲೇಷಿಸಬೇಕಿದೆ ಎಂದರು.