ನವದೆಹಲಿ (ಪಿಟಿಐ): ಫೆಬ್ರುವರಿಯಲ್ಲಿ ಕೈಗಾರಿಕಾ ವಲಯದ ಪ್ರಗತಿಯ ಸೂಚ್ಯಂಕ (ಐಐಪಿ) ಶೇ 0.6ರ ಕಳಪೆ ಮಟ್ಟಕ್ಕೆ ತೀವ್ರ ಕುಸಿತ ಕಂಡಿದೆ. ಇನ್ನೊಂದೆಡೆ, ಚಿಲ್ಲರೆ ಹಣದುಬ್ಬರ ಪ್ರಮಾಣದಲ್ಲಿಯೂ ಅಲ್ಪ ಪ್ರಮಾಣದ ಸುಧಾರಣೆ ಕಂಡು ಬಂದಿದೆ.
ಈ ಎರಡೂ ಅಂಶಗಳು ಮುಂದಿನ ತಿಂಗಳು ಭಾರತೀಯ ರಿಸರ್ವ್ ಬ್ಯಾಂಕ್ ಪ್ರಕಟಿಸಲಿರುವ ಹಣಕಾಸು ನೀತಿ ಪರಾಮರ್ಶೆಯಲ್ಲಿ ಬಡ್ಡಿಕಡಿತವಾಗುವ ನಿರೀಕ್ಷೆಯನ್ನು ಹೆಚ್ಚಿಸಿವೆ ಎಂದು ಆರ್ಥಿಕ ತಜ್ಞರು ವಿಶ್ಲೇಷಿಸಿದ್ದಾರೆ.
2012ರ ಫೆಬ್ರುವರಿಯಲ್ಲಿ ಶೇ 4.3ರಷ್ಟಿದ್ದ `ಕೈಗಾರಿಕಾ ವಲಯದ ಸೂಚ್ಯಂಕ'(ಐಐಪಿ) 2013ರ ಫೆಬ್ರುವರಿಯಲ್ಲಿ ಶೇ 0.6ಕ್ಕೆ ತಗ್ಗಿದೆ. ವಿದ್ಯುತ್ ಉತ್ಪಾದನೆ ಕುಸಿತ, ಗಣಿಗಾರಿಕೆ ಚಟುವಟಿಕೆ ಇಳಿಮುಖ ಮತ್ತು ಪರಿಕರ ತಯಾರಿಕೆ ಕ್ಷೇತ್ರದಲ್ಲಿನ ಕಳಪೆ ಸಾಧನೆಯ ಪರಿಣಾಮವಾಗಿಯೇ `ಐಐಪಿ' ತೀವ್ರ ಕುಸಿತ ಕಂಡಿದೆ.
ಈ ಮಧ್ಯೆ, `ಐಐಪಿ' ಈಗ ಕುಸಿತ ಕಂಡಿದ್ದರೂ, ಕೈಗಾರಿಕಾ ವಲಯದ ಪ್ರಗತಿಯಯೇನೂ ನಕಾರಾತ್ಮಕವಾಗಿಲ್ಲ. 2013-14ರಲ್ಲಿ ಕೈಗಾರಿಕಾ ವಲಯ ಉತ್ತಮ ಬೆಳವಣಿಗೆ ತೋರಲಿದೆ' ಎಂದು ಯೋಜನಾ ಆಯೋಗದ ಉಪಾಧ್ಯಕ್ಷ ಮೊಂಟೆಕ್ ಸಿಂಗ್ ಅಹ್ಲುವಾಲಿಯಾ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
`ದೇಶದ ಆರ್ಥಿಕ ಪ್ರಗತಿ ಗತಿ ದುರ್ಬಲಗೊಂಡಿರುವ ಹಿನ್ನೆಲೆಯಲ್ಲಿ ಬ್ಯಾಂಕಿಂಗ್ ಬಡ್ಡಿದರದಲ್ಲಿ ಕಡಿತ ಮಾಡುವುದು ಅನಿವಾರ್ಯವಾಗಿದೆ. ಬಹುಶಃ ಭಾರತೀಯ ರಿಸರ್ವ್ ಬ್ಯಾಂಕ್ ಈ ನಿಟ್ಟಿನಲ್ಲಿ ಗಂಭೀರ ಗಮನ ಹರಿಸಲಿದೆ' ಎಂದು `ಕ್ರಿಸಿಲ್' ಸಂಸ್ಥೆಯ ಮುಖ್ಯ ಅರ್ಥಶಾಸ್ತ್ರಜ್ಞ ಡಿ.ಕೆ.ಜೋಶಿ ಅಭಿಪ್ರಾಯಪಟ್ಟಿದ್ದಾರೆ.
ಹಣದುಬ್ಬರ
ಶುಕ್ರವಾರ ಬಿಡುಗಡೆಯಾದ ಬಳಕೆದಾರರ ಧಾರಣೆ ಸೂಚ್ಯಂಕ(ಸಿಪಿಐ) ಆಧರಿಸಿದ ಚಿಲ್ಲರೆ ಹಣದುಬ್ಬರ ಮಾರ್ಚ್ನಲ್ಲಿ ಶೇ 10.39ಕ್ಕೆ ಅಲ್ಪ ಪ್ರಮಾಣದಲ್ಲಿ ಇಳಿಕೆಯಾಗಿದೆ. ತರಕಾರಿಗಳು ಮತ್ತು ಪೌಷ್ಠಿಕಾಂಶಭರಿತ ಆಹಾರ ಪದಾರ್ಥಗಳ ಬೆಲೆ ಏರುತ್ತಲೇ ಇದ್ದುದರಿಂದ ಚಿಲ್ಲರೆ ಹಣದುಬ್ಬರವೂ ಕಳೆದ ಐದು ತಿಂಗಳಿಂದ ಏರು ಮುಖವಾಗಿಯೇ ಇದ್ದಿತು ಎಂಬುದು ಗಮನಾರ್ಹ.
ಬಳಕೆದಾರರ ಧಾರಣೆ ಸೂಚ್ಯಂಕ ಫೆಬ್ರುವರಿಯಲ್ಲಿ ಶೇ 10.91ರಷ್ಟಿತ್ತು.