ಶಿವಮೊಗ್ಗ: ಗ್ರಾಮೀಣ ಜನತೆ ನಗರ ಪ್ರದೇಶಗಳತ್ತ ವಲಸೆ ಹೋಗುವುದನ್ನು ತಡೆಯಲು ಪ್ರತಿ ತಾಲ್ಲೂಕು ಮಟ್ಟದಲ್ಲಿ ಕೈಗಾರಿಕಾ ವಲಯ ಸ್ಥಾಪಿಸುವ ಬಗ್ಗೆ ಕೈಗಾರಿಕಾ ಸಚಿವರೊಂದಿಗೆ ಚರ್ಚೆ ನಡೆಸಿದ್ದೇನೆ ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಕಿಮ್ಮನೆ ರತ್ನಾಕರ ತಿಳಿಸಿದರು.
ನಗರದ ಬಾಪೂಜಿನಗರದ ದೇವಾಂಗ ವಿದ್ಯಾರ್ಥಿನಿಲಯದಲ್ಲಿ ಶನಿವಾರ ಜಿಲ್ಲಾ ಕೈಗಾರಿಕಾ ಸರಬರಾಜು ಮತ್ತು ಮಾರಾಟ ಸಹಕಾರ ಸಂಘ ನಿಯಮಿತ ಹಮ್ಮಿಕೊಂಡಿದ್ದ ಅಭಿನಂದನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಗ್ರಾಮೀಣ ಜನತೆ ನಗರಗಳತ್ತ ವಲಸೆ ಹೋಗುತ್ತಿರುವುದು ಹಳ್ಳಿಗಳಿಗೂ ಒಳ್ಳೆಯದಲ್ಲ; ನಗರಗಳಿಗೂ ಒಳಿತಲ್ಲ. ಆದ್ದರಿಂದ ಪ್ರತಿ ತಾಲ್ಲೂಕುಗಳಲ್ಲೂ ಕೈಗಾರಿಕಾ ವಲಯ ಸ್ಥಾಪಿಸಿದ್ದಲ್ಲಿ ದೇಶದ ಆರ್ಥಿಕ ಮತ್ತು ಸಾಮಾಜಿಕ ಭದ್ರೆತೆ ಉತ್ತಮವಾಗಿರುತ್ತದೆ ಎಂದರು.
ಜಿಲ್ಲಾ ಕೈಗಾರಿಕಾ ಸರಬರಾಜು ಮತ್ತು ಮಾರಾಟ ಸಹಕಾರ ಸಂಘ ಸ್ವತಃ ನಿವೇಶನ ಪಡೆದು ಕಟ್ಟಡ ನಿರ್ಮಾಣ ಆರಂಭಿಸಿದಲ್ಲಿ ನಿರ್ಮಾಣ ವೆಚ್ಚದ ಶೇ. 25ರಿಂದ 30 ರಷ್ಟು ಅನುದಾನ ಒದಗಿಸಲು ಕ್ರಮಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.
ಸಚಿವ ಕಿಮ್ಮನೆ ರತ್ನಾಕರ, ಶಾಸಕರಾದ ಕೆ.ಬಿ.ಪ್ರಸನ್ನಕುಮಾರ್, ಶಾರದಾ ಪೂರ್ಯನಾಯ್ಕ ಅವರನ್ನು ಸನ್ಮಾನಿಸಲಾಯಿತು. ಸಂಘದ ಅಧ್ಯಕ್ಷ ಗುಣಸೇ ರಾಮಸ್ವಾಮಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ನಿರ್ದೇಶಕರಾದ ಬಲ್ಕಿಶ್ ಬಾನು, ಪರಶುರಾಮ್, ಜಿ.ಮಾದಪ್ಪ, ಸುರೇಶ್ ವಾಟಗೋಡು ಉಪಸ್ಥಿತರಿದ್ದರು.