ಕನಕಗಿರಿ: ಇಲ್ಲಿಗೆ ಸಮೀಪದ ಹುಲಿಹೈದರ ಗ್ರಾಮದ ಎರಡನೇ ವಾರ್ಡ್ನ ಚೆನ್ನದಾಸರ ಓಣಿಯಲ್ಲಿ ವಿದ್ಯುತ್ ಪರಿವರ್ತಕ ಕೈಗೆ ಸಿಗುತ್ತದೆ ಎಂದು ಅಲ್ಲಿನ ನಿವಾಸಿ ಹಾಗೂ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಶಿವಶಂಕರ ಚೆನ್ನದಾಸರ ತಿಳಿಸಿದ್ದಾರೆ.
ಈ ಭಾಗದಲ್ಲಿ ಸಣ್ಣ ಮಕ್ಕಳು ಹಾಗೂ ಶಾಲಾ ವಿದ್ಯಾರ್ಥಿಗಳ ಓಡಾಟ ಹೆಚ್ಚಳವಾಗಿದ್ದು ಅದನ್ನು ಬೇರೆಡೆಗೆ ಹಾಕುವಂತೆ ಜೆಸ್ಕಾಂ ಇಲಾಖೆಗೆ ಪತ್ರ ಬರೆದರೂ ಯಾವುದೇ ಉಪಯೋಗವಾಗಿಲ್ಲ ಎಂದು ಶಿವಶಂಕರ ದೂರಿದ್ದಾರೆ.
ವಿದ್ಯುತ್ ಸರಬರಾಜು ಇದ್ದಾಗ ವಿದ್ಯುತ್ ಪರಿವರ್ತಕದಿಂದ ಬೆಂಕಿ ಕಿಡಿ ಹೊರಬರುತ್ತದೆ, ಈ ಪರಿಸರದ ಜನತೆ ಆತಂಕದಿಂದ ಜೀವನ ಸಾಗಿಸುತ್ತಿದ್ದಾರೆ, ರಾತ್ರಿ ವೇಳೆ ಭಯದ ವಾತಾವರಣದಲ್ಲಿ ಮಲಗಬೇಕಾಗಿದೆ ಎಂದು ಅವರು ತಮ್ಮ ಅಳಲು ವ್ಯಕ್ತಪಡಿಸಿದರು.
ಗ್ರಾಮದ ಲೈನ್ಮ್ಯಾನ್ಗೆ ವಿದ್ಯುತ್ ಪರಿವರ್ತಕ ಸ್ಥಳಾಂತರ ಮಾಡುವಂತೆ ಸಾಕಷ್ಟು ಸಲ ಮನವಿ ಮಾಡಿಕೊಳ್ಳಲಾಗಿದೆ, ಜನಪ್ರತಿನಿಧಿಗಳ ಮೂಲಕ ಪತ್ರ ಬರೆದು ಒತ್ತಡ ಹಾಕಲಾಗಿದೆ, ಜೆಸ್ಕಾಂ ಅಧಿಕಾರಿಗಳು ಈ ವಿಷಯ ತಮಗೆ ಸಂಬಂಧಿಸಿಲ್ಲ ಎನ್ನುವಂತೆ ವರ್ತಿಸುತ್ತಿದ್ದಾರೆ ಎಂದು ಅಲ್ಲಿನ ನಿವಾಸಿಗಳು ದೂರಿದರು.
ಅಪಾಯಕ್ಕೆ ಆಹ್ವಾನ ನೀಡುವ ವಿದ್ಯುತ್ ಪರಿವರ್ತಕವನ್ನು ಬೇರೆಡೆಗೆ ಸ್ಥಳಾಂತರ ಮಾಡದಿದ್ದರೆ ಕನಕಗಿರಿ-ತಾವರಗೆರೆ ರಸ್ತೆಯನ್ನು ಬಂದ್ ಮಾಡಿ ಹೋರಾಟ ನಡೆಸಲಾಗುವುದು ಎಂದು ಶಿವಶಂಕರ ಎಚ್ಚರಿಕೆ ನೀಡಿದ್ದಾರೆ.