ತುಮಕೂರು: ತಾಲ್ಲೂಕಿನ ಕೈದಾಳ ಗ್ರಾಮದಲ್ಲಿ ಚನ್ನಕೇಶವ ಮತ್ತು ಗಂಗಾಧರೇಶ್ವರ ದೇವಾಲಯಗಳ ವಿಮಾನಗೋಪುರ ಮತ್ತು ರಾಜಗೋಪುರಗಳ ಕಳಸಾರೋಹಣ, ಕುಂಭಾಭಿಷೇಕ ಮಹೋತ್ಸವ ಶನಿವಾರ ನೆರವೇರಿತು.
ಸಮಾರಂಭದಲ್ಲಿ ಮಾತನಾಡಿದ ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ, `ರಾಜ್ಯದಲ್ಲಿ ವಾಸ್ತುಶಿಲ್ಪಿಗಳ ಸಂಖ್ಯೆ ಬಹಳ ಕಡಿಮೆಯಿದೆ. ಜಕಣಾಚಾರಿಯ ಮೂಲನೆಲೆ ಎಂಬ ಪ್ರತೀತಿಯಿರುವ ಕೈದಾಳದಲ್ಲಿ ಶಿಲ್ಪಕಲಾ ಶಿಕ್ಷಣ ಕೇಂದ್ರ ಸ್ಥಾಪಿಸಬೇಕು. ಈ ಬಗ್ಗೆ ಜತೆ ಚರ್ಚಿಸಿ ಅಗತ್ಯ ಅನುದಾನ ಬಿಡುಗಡೆ ಮಾಡಿಸಲಾಗುವುದು~ ಎಂದು ಭರವಸೆ ನೀಡಿದರು.
`ಶಿಲ್ಪಕಲಾ ಶಿಕ್ಷಣ ಕೇಂದ್ರ ಸ್ಥಾಪಿಸಲು ಸರ್ಕಾರ ಆಲೋಚಿಸಿರುವುದು ಸಂತಸದ ಸಂಗತಿ. ಧರ್ಮೋತ್ಥಾನ ಟ್ರಸ್ಟ್ ಈಗಾಗಲೇ ಈ ಕುರಿತು ಪಠ್ಯಕ್ರಮ ಸಿದ್ಧಪಡಿಸಿದೆ. ಅದರ ಜತೆಗೆ ಎಲ್ಲ ಅಗತ್ಯ ಮಾರ್ಗದರ್ಶನ ಒದಗಿಸಲು ಸಿದ್ಧ~ ಎಂದು ಧರ್ಮಸ್ಥಳ ಧರ್ಮಾಧಿಕಾರಿ ಡಿ.ವೀರೇಂದ್ರ ಹೆಗ್ಗಡೆ ಹೇಳಿದರು.
ಕೈದಾಳವನ್ನು ಪ್ರಮುಖ ಯಾತ್ರಾಸ್ಥಳವಾಗಿ ಅಭಿವೃದ್ಧಿಪಡಿಸುವ ಆಶಯವನ್ನು ಶಾಸಕ ಸುರೇಶ್ಗೌಡ ವ್ಯಕ್ತಪಡಿಸಿದರು. ಶಿಲ್ಪಕಲಾ ಕಾಲೇಜು ಸ್ಥಾಪನೆಗೆ ಸಂಸದರ ನಿಧಿಯಿಂದ ಅನುದಾನ ಬಿಡುಗಡೆ ಮಾಡುವುದಾಗಿ ಸಂಸದ ಜಿ.ಎಸ್.ಬಸವರಾಜ್ ತಿಳಿಸಿದರು.
ದೇಗುಲ ಪುನರುತ್ಥಾನ ಕಾರ್ಯದಲ್ಲಿ ದುಡಿದ ಕಲಾವಿದರಾದ ಜಯಣ್ಣಾಚಾರ್, ಶೇಖರ್, ಬಾಲರಾಜ್, ದೇಗುಲ ವ್ಯವಸ್ಥಾಪನ ಸಮಿತಿಯ ರಂಗಸ್ವಾಮಿ, ಸಿದ್ದಹನುಮಯ್ಯ, ಹನುಮಂತಯ್ಯ ಅವರನ್ನು ಧರ್ಮೋತ್ಥಾನ ಟ್ರಸ್ಟ್ ವತಿಯಿಂದ ಸನ್ಮಾನಿಸಲಾಯಿತು. ಜಿಲ್ಲಾಧಿಕಾರಿ ಸಿ.ಸೋಮಶೇಖರ್, ಕಳಸದ ದಾನಿ ತಾಯಮ್ಮ ಇದ್ದರು.
ವೇದ ವಿದ್ವಾಂಸ ಶ್ರೀವತ್ಸ ನರಸಿಂಹಭಟ್ಟ ನೇತೃತ್ವದಲ್ಲಿ ವಿವಿಧ ಧಾರ್ಮಿಕ ವಿಧಿ ವಿಧಾನಗಳು ನೆರವೇರಿದವು. ದೇಗುಲದ ಸಮೀಪ ಸಮುದಾಯ ಭವನ ನಿರ್ಮಾಣಕ್ಕೆ ಇದೇ ಸಂದರ್ಭದಲ್ಲಿ ಭೂಮಿಪೂಜೆ ನೆರವೇರಿಸಲಾಯಿತು.
-----------