ಹುಬ್ಬಳ್ಳಿ: `ಸ್ವಾತಂತ್ರೋತ್ಸವದ ಹಿನ್ನೆಲೆಯಲ್ಲಿ ಸನ್ನಡತೆ ಆಧಾರದಲ್ಲಿ ಐದು ಮಂದಿ ಜೀವಾವಧಿ ಕೈದಿಗಳ ಅವಧಿ ಪೂರ್ವ ಬಿಡುಗಡೆಗೆ ರಾಜ್ಯಪಾಲರು ಹಸಿರು ನಿಶಾನೆ ತೋರಿರುವುದು, ಇತರ ಜೈಲುವಾಸಿಗಳ ತೀವ್ರ ಅಸಮಾಧಾನಕ್ಕೆ ಕಾರಣವಾಗಿದೆ. ಬಿಡುಗಡೆ ನಿರೀಕ್ಷೆಯಲ್ಲಿದ್ದ ಕೈದಿಗಳು ಈ ಕುರಿತು ಬಹಿರಂಗವಾಗಿ ತಮ್ಮ ನೋವು ತೋಡಿಕೊಂಡಿದ್ದಾರೆ~ ಎಂದು ಕಾರಾಗೃಹ ಮೂಲಗಳು `ಪ್ರಜಾವಾಣಿ~ಗೆ ತಿಳಿಸಿವೆ.
`ಅವಧಿಪೂರ್ವ ಬಿಡುಗಡೆಗಾಗಿ ರಾಜ್ಯ ಸರ್ಕಾರ ಅರ್ಹ 90 ಮಂದಿಯ ಪಟ್ಟಿ ನೀಡಿದ್ದರೂ ರಾಜ್ಯಪಾಲರು ಕೇವಲ ಐದು ಮಂದಿಯ ಬಿಡುಗಡೆಗೆ ಒಪ್ಪಿದ್ದಾರೆ. ಆ ಮೂಲಕ ನಮ್ಮ ಮಧ್ಯೆ ತಾರತಮ್ಯ ಮಾಡಲಾಗಿದೆ. ಇದು ಮಾನಸಿಕವಾಗಿ ಮತ್ತಷ್ಟು ಕುಗ್ಗುವಂತಹ ವಾತಾವರಣ ಸೃಷ್ಟಿಸಿದೆ. ಸಾಮಾಜಿಕ ನ್ಯಾಯ ನಿರೀಕ್ಷಿಸಿದ್ದ ನಮಗೆ, ರಾಜ್ಯಪಾಲರ ಕ್ರಮ ನೋವು ಉಂಟು ಮಾಡಿದೆ~ ಎಂದು ಬೆಳಗಾವಿ ಹಿಂಡಲಗಾ ಕೇಂದ್ರ ಕಾರಾಗೃಹದಲ್ಲಿ ಜೀವಾವಧಿ ಶಿಕ್ಷೆ ಅನುಭವಿಸುತ್ತಿರುವ ಕೈದಿಯೊಬ್ಬ ತಿಳಿಸಿದ್ದಾನೆ.
ಇದೇ ಕಾರಣಕ್ಕೆ ಜೈಲಿನಲ್ಲಿ ನಡೆದ ಸ್ವಾತಂತ್ರೋತ್ಸವದ ಧ್ವಜಾರೋಹಣದಲ್ಲಿ ಮಾತ್ರ ಭಾಗವಹಿಸಿ, ರಾಷ್ಟ್ರಧ್ವಜಕ್ಕೆ ಗೌರವ ಸೂಚಿಸಿದ್ದನ್ನು ಹೊರತುಪಡಿಸಿದರೆ, ಇತರ ಕಾರ್ಯಕ್ರಮಗಳಿಂದ ದೂರ ಉಳಿದು ನಮ್ಮ ನೋವು ವ್ಯಕ್ತಪಡಿಸಿದ್ದೇವೆ. ಸಿಹಿತಿಂಡಿಯನ್ನೂ ಸೇವಿಸಿಲ್ಲ~ ಎಂದಿದ್ದಾನೆ.
`ಕಾರಾಗೃಹ ನಿಯಮದ ಪ್ರಕಾರ, ಮಾಫಿ ಅವಧಿ ಸೇರಿ 13 ವರ್ಷ 2 ತಿಂಗಳು ಪೂರ್ತಿಯಾದ ಕೈದಿಗಳು ಸನ್ನಡತೆ ಆಧಾರದಲ್ಲಿ ಬಿಡುಗಡೆಗೆ ಶಿಫಾರಸು ಮಾಡುವ `ಸಲಹಾ ಮಂಡಳಿ~ಯ `ಸಂದರ್ಶನ~ಕ್ಕೆ ಅರ್ಹರು. ಹೀಗಾಗಿ 10 ವರ್ಷ ಪೂರೈಸಿದ ಮಹಿಳಾ ಕೈದಿಗಳಿದ್ದರೂ 90 ಮಂದಿಯ ಪಟ್ಟಿಯಲ್ಲಿ ಸ್ಥಾನ ಪಡೆದಿಲ್ಲ~ ಎಂದೂ ಮೂಲಗಳು ತಿಳಿಸಿವೆ.
........
`ರಾಜ್ಯದ ಎಂಟು ಕೇಂದ್ರ ಕಾರಾಗೃಹಗಳಲ್ಲಿ 14 ವರ್ಷ ಪೂರ್ತಿಗೊಳಿಸಿದ 130 ಕೈದಿಗಳಿದ್ದಾರೆ. 2009ರಲ್ಲಿ ಅವಧಿ ಪೂರ್ವ ಬಿಡುಗಡೆಗಾಗಿ ಸರ್ಕಾರ ತಯಾರಿಸಿದ್ದ 594 ಕೈದಿಗಳ ಪಟ್ಟಿಯನ್ನು ಬದಿಗಿಟ್ಟು, ಈ ಬಾರಿ ಹೊಸತಾಗಿ 90 ಕೈದಿಗಳ ಪಟ್ಟಿ ತಯಾರಿಸಲಾಗಿತ್ತು.
ಈ ಪೈಕಿ ಬೆಂಗಳೂರು ಜೈಲಿನಿಂದ ಒಬ್ಬ, ಮೈಸೂರಿನಿಂದ ಇಬ್ಬರು ಮತ್ತು ದೇವನಹಳ್ಳಿ ಬಳಿ ಇರುವ ಬಯಲು ಬಂದಿಖಾನೆಯಿಂದ ಇಬ್ಬರು ಹೀಗೆ ಐದು ಮಂದಿ ಜೀವಾವಧಿ ಶಿಕ್ಷಾ ಬಂಧಿಗಳ ಬಿಡುಗಡೆಗೆ ಅವಕಾಶ ನೀಡಲಾಗಿದೆ~ ಎಂದು ಮೂಲಗಳು ತಿಳಿಸಿವೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.