ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೈದಿಗಳ ಮನ ಪರಿವರ್ತನೆ ಕಾರ್ಯಕ್ರಮ

Last Updated 13 ಅಕ್ಟೋಬರ್ 2011, 8:50 IST
ಅಕ್ಷರ ಗಾತ್ರ

ಹಾವೇರಿ: ಬೇಡನಾಗಿ ಹುಟ್ಟಿ ದರೋಡೆ, ಕಳ್ಳತನದ ಮೂಲಕ ಜೀವನ ಸಾಗಿಸುತ್ತಿದ್ದ ವಾಲ್ಮೀಕಿ ನಂತರದಲ್ಲಿ ಬದಲಾವಣೆಯಾಗಿ ಮಾನವ ಕುಲಕ್ಕೆ ಮೌಲ್ಯಯುತ ಮಹಾಕಾವ್ಯವೊಂದನ್ನು ನೀಡಿರುವುದು ಎಲ್ಲರಿಗೂ ತಿಳಿದ ಸಂಗತಿಯಾಗಿದ್ದು, ಪ್ರತಿಯೊಬ್ಬ ಕೈದಿಗಳಿಗೂ ಅವರ ಜೀವನವೇ ದಾರಿದೀಪವಾಗಿದೆ~ ಎಂದು ವಾಲ್ಮೀಕಿ ನಾಯಕ ಕ್ಷೇಮಾಭಿವೃದ್ದಿ ಸಂಘದ ಅಧ್ಯಕ್ಷೆ ಹಾಗೂ ನಗರಸಭೆ ಸದಸ್ಯೆ ಮಂಜುಳಾ ಕರಬಸಮ್ಮನವರ ಸಲಹೆ ಮಾಡಿದರು.

ನಗರದ ಹೊರವಲಯದ ಕೆರಿಮತ್ತಿಹಳ್ಳಿಯಲ್ಲಿರುವ ಜಿಲ್ಲಾ ಕಾರಾಗೃಹದಲ್ಲಿ ವಾಲ್ಮೀಕಿ ಜಯಂತಿ ಅಂಗವಾಗಿ ಹಮ್ಮಿಕೊಂಡ ಕೈದಿಗಳ ಮನಪರಿವರ್ತನಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಪರಿವರ್ತನೆ ಜಗದ ನಿಯಮ. ಅಂತೆಯೇ ಶ್ರೀಕೃಷ್ಣ ಭಗವದ್ಗಿತೆಯಲ್ಲಿ ನಿನ್ನದಲ್ಲದ ತಪ್ಪಿಗೆ ಕೊರಗಬೇಡ ಎಂದು ಹೇಳಿದ್ದಾನೆ. ಅಲ್ಲದೇ ಅರಿಯದೇ ಮಾಡಿದ ತಪ್ಪಿಗೆ ಪ್ರಾಯಶ್ಚಿತ್ತಕ್ಕಿಂತ ದೊಡ್ಡ ಶಿಕ್ಷೆ ಬೇರೊಂದಿಲ್ಲ. ಕಾರಣ ಇಲ್ಲಿ ಯಾವುದೋ ಕಾರಣದಿಂದ ಶಿಕ್ಷೆಗೊಳಪಟ್ಟ ಸಹೋದರ ಸಹೋದರಿಯರು ಮುಂದಿನ ದಿನಗಳಲ್ಲಿ ಉತ್ತಮ ಭವಿಷ್ಯವನ್ನು ರೂಪಿಸಿಕೊಳ್ಳಬೇಕೆಂದು ಹೇಳಿದರು.

ಸಂದರ್ಭ, ಸನ್ನಿವೇಶಕ್ಕೆ ಸಿಲುಕಿ ಅಪರಾಧಿಗಳಿಗಿದ್ದಕ್ಕೆ ಜೀವನವೇ ಮುಗಿಯಿತು ಎಂದುಕೊಳ್ಳದೇ, ಉತ್ತಮ ಜೀವನ ನಡೆಸಬೇಕೆಂಬ ಸಂಕಲ್ಪವನ್ನು ಮಾಡಿಕೊಂಡು. ಅದಕ್ಕಾಗಿ ಇಂದಿನಿಂದಲೇ ತಯಾರಿ ಆರಂಭ ಮಾಡಿ. ಉತ್ತಮ ಚಿಂತನೆಗಳು ನಿಮ್ಮಲ್ಲಿ ಆರಂಭವಾದರೆ, ಪ್ರತಿಫಲವೂ ನಿಮ್ಮದೇ ಆಗಿರುತ್ತದೆ ಎಂದು ಕಿವಿಮಾತು ಹೇಳಿದರು.

ಕಾರ್ಯಕ್ರಮ ಉದ್ಘಾಟಿಸಿದ ಸಂಘಟನೆ ಜಿಲ್ಲಾ ಅಧ್ಯಕ್ಷ ಬಸವರಾಜ ಹಾದಿಮನಿ ಮಾತನಾಡಿ, ಬೇಡನಾದ ವಾಲ್ಮೀಕಿ ಜೀವನದಲ್ಲಿ ಪರಿವರ್ತನೆ ಕಂಡು, ರಾಮಾಯಣ ಬರೆಯುವ ಮೂಲಕ ವಿಶ್ವಕ್ಕೆ ಜ್ಞಾನದ ಬೆಳಕನ್ನೇ ನೀಡಿದ್ದಾನೆ. ಇಂಥ ಯೋಗಿ, ಮಹರ್ಷಿ ತೋರಿದ ಜ್ಞಾನದ ಬೆಳಕಿನಲ್ಲಿ ಪ್ರತಿಯೊಬ್ಬರು ಸಾಗಬೇಕಿದೆ ಎಂದು ಹೇಳಿದರು.

ವಕೀಲ ಎಸ್.ಆರ್.ಹೆಗಡೆ, ಲಲಿತಾ ಗುಂಡೇನಹಳ್ಳಿ, ಎನ್.ಟಿ.ಹಾವೇರಿ, ಶೇಖಪ್ಪ ಕಳ್ಳಿಮನಿ, ವೇದವ್ಯಾಸ ಕಟ್ಟಿ, ಮಾಲತೇಶ ಮೂಲಿಮನಿ, ಕೆ.ಕೆ.ಅಂಗರಗಟ್ಟಿ ಸೇರಿದಂತೆ ಅನೇಕರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಇದೇ ಸಂದರ್ಭದಲ್ಲಿ  ವಾಲ್ಮೀಕಿ ನಾಯಕ ಕ್ಷೇಮಾಭಿವೃದ್ದಿ ಸಂಘದಿಂದ ವಾಲ್ಮೀಕಿ ಜಯಂತಿ ಅಂಗವಾಗಿ ಕೈದಿಗಳಿಗೆ ಹಣ್ಣು, ಹಂಪಲು ವಿತರಿಸಲಾಯಿತು.

ಪಾರ್ವತಿ ಬೇವಿನಹಳ್ಳಿ ಪ್ರಾರ್ಥಿಸಿದರು. ನಿಂಗಪ್ಪ ಧೋಣಿ ಸ್ವಾಗತಿಸಿದರು. ವೀರನಗೌಡ ಕರೆಕಟ್ಟಿ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT