ಏಷ್ಯಾದ ಅತಿ ಸುಂದರ ಪ್ರವಾಸಿ ಕೇಂದ್ರಗಳಲ್ಲಿ ಒಂದಾಗಿರುವ ಶ್ರೀಲಂಕಾದ ಬಗ್ಗೆ ತಿಳಿಸಲು ಹಾಗೂ ಶ್ರೀಲಂಕಾವನ್ನು ಒಂದು ಪ್ರವಾಸಿ ಹಾಗೂ ವ್ಯಾಪಾರಿ ಕೇಂದ್ರ ಎಂಬುದಾಗಿ ಪ್ರದರ್ಶಿಸಲು `ಗೆಟ್ ಶ್ರೀಲಂಕನೇಡ್' ಅಭಿಯಾನವನ್ನು ಶ್ರೀಲಂಕಾ ಪ್ರವಾಸೋದ್ಯಮ ಇಲಾಖೆ ಬೆಂಗಳೂರಿನಲ್ಲಿ ಆರಂಭಿಸಲಿದೆ.
ಶ್ರೀಲಂಕಾ ಪ್ರವಾಸೋದ್ಯಮ ಉತ್ತೇಜನಾ ದಳ ಆಯೋಜಿಸಿರುವ ಮೂರು ದಿನಗಳ ಅಭಿಯಾನದಲ್ಲಿ, ಮಾಧ್ಯಮ ನಿರೂಪಣೆ, ಫ್ಯಾಷನ್ ಶೋ ಜತೆಗೆ ಶ್ರೀಲಂಕಾ ಸಂಜೆ, ಶ್ರೀಲಂಕಾ ಆಹಾರೋತ್ಸವ, ಎರಡೂ ರಾಷ್ಟ್ರಗಳ ವ್ಯಾಪಾರಗಳ ನಡುವೆ ಬಿ2ಬಿ ಸಭೆಗಳು, ಉಪನ್ಯಾಸಗಳಂತ ವಿವಿಧ ಚಟುವಟಿಕೆಗಳು ಇರಲಿವೆ. ಈ ಕಾರ್ಯಕ್ರಮದಲ್ಲಿ ಪ್ರವಾಸೋದ್ಯಮ, ವ್ಯಾಪಾರ ಹಾಗೂ ಹೂಡಿಕೆಯನ್ನು ಪ್ರತಿನಿಧಿಸುವ ಶ್ರೀಲಂಕಾದ ಸುಮಾರು 70 ಸಾರ್ವಜನಿಕ ಮತ್ತು ಖಾಸಗಿ ಸಂಸ್ಥೆಗಳು ಪಾಲ್ಗೊಳ್ಳಲಿವೆ.
`ಗೆಟ್ ಶ್ರೀಲಂಕನೇಡ್ ಅಭಿಯಾನ'ವು ಬೆಂಗಳೂರಿನ ಗರುಡಾ ಮಾಲ್ನಲ್ಲೂ ನಡೆಯಲಿದ್ದು, ಇಲ್ಲಿ ಬರುವ ಗ್ರಾಹಕರಿಗೆ ಶ್ರೀಲಂಕಾದ ಆಹಾರವನ್ನು ಸವಿಯುವ ಅವಕಾಶವಿದೆ, ಅಲ್ಲದೆ, ಶ್ರೀಲಂಕಾದ ಸಂಸ್ಕೃತಿ, ಸಾಂಪ್ರದಾಯಿಕ ನೃತ್ಯವನ್ನು ಸವಿಯಬಹುದು.
ಇಲ್ಲಿನ ಡಿಜೆಗಳು ಹಾಗೂ ಮನರಂಜನೆಕಾರರು ಸಭಿಕರಲ್ಲಿ ಸಂವಾದವನ್ನೂ ಮಾಡಲಿದ್ದಾರೆ. ಗರುಡಾ ಶಾಪಿಂಗ್ ಮಾಲ್ನಲ್ಲಿ ಲೈವ್ ಗೇಮ್ಗಳೂ ನಡೆಯಲಿದ್ದು, ಅದರಲ್ಲಿ ವಿಜೇತರಾದವರಿಗೆ ಶ್ರೀಲಂಕಾಗೆ ಉಚಿತ ಹಾಲಿಡೇ ಪ್ಯಾಕೇಜ್ನ್ನು ಬಹುಮಾನವಾಗಿ ನೀಡಲಾಗುತ್ತದೆ. ಫೆ. 22ರಂದು ಮಧ್ಯಾಹ್ನ ಗರುಡಾ ಶಾಪಿಂಗ್ ಮಾಲ್ನಲ್ಲಿ ನಡೆಯುವ ಚಟುವಟಿಕೆಗಳಲ್ಲಿ ಶ್ರೀಲಂಕಾದ ಖ್ಯಾತ ಕ್ರಿಕೆಟಿಗರಾದ ಸನತ್ ಜಯಸೂರ್ಯ, ಮಹೇಲಾ ಜಯವರ್ಧನೆ, ತಿಲಕರತ್ನೆ ದಿಲ್ಷಾನ್ ಅವರೂ ಪಾಲ್ಗೊಳ್ಳಲಿದ್ದಾರೆ.
ಶ್ರೀಲಂಕಾದಲ್ಲಿನ ಪ್ರಿಸ್ಟಿನ್ ಬೀಚ್ಗಳು, ಶಾಪಿಂಗ್, ಸಾಹಸ, ಆಹಾರ, ನಿಸರ್ಗ, ಕ್ಯಾಸಿನೋಗಳು, ನೈಟ್ ಲೈಫ್ ಮತ್ತಿತರ ವಿವಿಧ ಪ್ರವಾಸಿ ಆಕರ್ಷಣೆಗಳಿಂದಾಗಿ ಭಾರತೀಯ ಪ್ರವಾಸಿಗರಿಗೆ ಶ್ರೀಲಂಕಾವು ಒಂದು ಅತ್ಯುತ್ತಮ ಪ್ರವಾಸಿ ಕೇಂದ್ರವಾಗಿದೆ.
ಭಾರತ ಮತ್ತು ಶ್ರೀಲಂಕಾದ ನಡುವೆ ಒಂದು ವಾರದಲ್ಲಿ ಸುಮಾರು 100 ವಿಮಾನಗಳು (ಶ್ರೀಲಂಕನ್ ಏರ್ಲೈನ್ಸ್, ಜೆಟ್ ಏರ್ವೇಸ್, ಇಂಡಿಯನ್ ಏರ್ಲೈನ್ಸ್) ಸಂಚರಿಸುತ್ತವೆ. ಶ್ರೀಲಂಕನ್ ಏರ್ಲೈನ್ಸ್ ಭಾರತದ ಎಂಟು ನಗರಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಎರಡೂ ರಾಷ್ಟ್ರಗಳ ನಡುವೆ ಸುಲಭ ಸಂಪರ್ಕ ಏರ್ಪಡುವಂತೆ ಮಾಡುತ್ತಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.