ರಾಮನಗರ: ವೃತ್ತಿಯಲ್ಲಿ ಕೌಶಲ ಬೆಳೆಸಿಕೊಳ್ಳಲು ತರಬೇತಿ ಅಗತ್ಯವಾಗಿದ್ದು. ಈ ನಿಟ್ಟಿನಲ್ಲಿ ಜವಳಿ ಮತ್ತು ಕೈಮಗ್ಗ ಇಲಾಖೆ ಉತ್ತಮ ಕೆಲಸ ಮಾಡುತ್ತಿದೆ ಎಂದು ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ಸುಜಾತಾ ಶಿವಲಿಂಗಪ್ಪ ಶ್ಲಾಘಿಸಿದರು.
ಜವಳಿ ಮತ್ತು ಕೈಮಗ್ಗ ಇಲಾಖೆ ಆಶ್ರಯದಲ್ಲಿ ಸುವರ್ಣ ವಸ್ತ್ರ ನೀತಿ ಯೋಜನೆಯಡಿ ನಡೆದ ಹೊಲಿಗೆಯಂತ್ರ ಬಳಕೆ, ನಿರ್ವಹಣೆ ತರಬೇತಿ ಶಿಬಿರದಲ್ಲಿ ಅವರು ಮಾತನಾಡಿದರು.
ಸ್ಪರ್ಧಾತ್ಮಕ ಯುಗದಲ್ಲಿ ಪ್ರತಿನಿತ್ಯ ಹೊಸ ಅವಿಷ್ಕಾರಗಳು ಆಗುತ್ತಿವೆ. ನಿತ್ಯ ಫ್ಯಾಷನ್ ಬದಲಾಗುತ್ತಿರುವ ಹಿನ್ನೆಲೆಯಲ್ಲಿ ವೃತ್ತಿಯಲ್ಲಿ ಕಲಾತ್ಮಕತೆಯನ್ನು ಅಳವಡಿಸಿಕೊಂಡು ಜಾಗತಿಕ ಸ್ಪರ್ಧೆಯನ್ನು ಎದುರಿಸಬೇಕು ಎಂದು ಅವರು ಕಿವಿಮಾತು ಹೇಳಿದರು.
ಇಲಾಖೆಯ ಸಹಾಯಕ ನಿರ್ದೇಶಕ ಜನಾರ್ದನ್ ಮಾತನಾಡಿ, ಅಭ್ಯರ್ಥಿಗಳಿಗೆ ತರಬೇತಿ ನಂತರ ನಿರುದ್ಯೋಗ ಸಮಸ್ಯೆಯ ನಿವಾರಿಸುವ ನಿಟ್ಟಿನಲ್ಲಿ ಖಾಸಗಿ ಗಾರ್ಮೆಂಟ್ಸ್ ಜತೆ ಒಡಂಬಡಿಕೆ ಮಾಡಿಕೊಳ್ಳಲಾಗಿದೆ ಎಂದರು.
ತರಬೇತಿದಾರ ತರನುಂ ಮಾತನಾಡಿ, ಫ್ಯಾಷನ್ ಡಿಸೈನಿಂಗ್ ಕ್ಷೇತ್ರದಲ್ಲಿ ಯಂತ್ರ ನಿರ್ವಾಹಕರಿಗೆ ವ್ಯಾಪಕ ಬೇಡಿಕೆ ಇದೆ. ತರಬೇತಿದಾರರು ಸೃಜನಶೀಲತೆ ಅಳವಡಿಸಿಕೊಂಡು, ಹೊಸ ಮಾದರಿಯ ಸೃಷ್ಟಿಗೆ ಮುಂದಾದರೆ ಆದಾಯಗಳಿಸಬಹುದು ಎಂದರು.