ಚಿಂತಾಮಣಿ: ತಾಲ್ಲೂಕಿನ ಕೈವಾರದ ಯೋಗಿನಾರೇಯಣ ಮಠದ ನಾದಸುಧಾರಸ ಸಾಂಸ್ಕೃತಿಕ ವೇದಿಕೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಬೆಂಗಳೂರು ಸಹೋದರರಾದ ವಿದ್ವಾನ್ ಹರಿಹರನ್ ಮತ್ತು ವಿದ್ವಾನ್ ಅಶೋಕ್ ಅವರು ಪ್ರಸ್ತುತ ಪಡಿಸಿದ ಸಂಗೀತ ಕಛೇರಿ ಎಲ್ಲರ ಮನ ಸೆಳೆಯಿತು.
ಪಕ್ಕವಾದ್ಯದಲ್ಲಿ ವಿದ್ವಾನ್ ಬಿ.ಧೃವರಾಜ್ ಮೃದಂಗ, ವಿದ್ವಾನ್ ಕಟ್ಟೆಪುರಂ ಸತ್ಯಪ್ರಕಾಶ್ ಪಿಟೀಲು ಸಾಥ್ ನೀಡಿದರು. ಕಾರ್ಯಕ್ರಮದಲ್ಲಿ ಕೇಳಿಬಂದ ತ್ಯಾಗರಾಜರ, ಕನಕ-ಪುರಂದರ ದಾಸರ ದಾಸವಾಣಿ ಮತ್ತು ಕೈವಾರ ತಾತಯ್ಯ ಅವರ ಕೃತಿಗಳನ್ನು ಹಾಡುವ ಮೂಲಕ ನೆರೆದಿದ್ದ ಭಕ್ತರನ್ನು ಭಾವಪರವಶಗೊಳಿಸಿದರು.
ನಾರೇಯಣ ಮಠದಲ್ಲಿ ಬೆಳಿಗ್ಗೆ 11ರಿಂದ ಸಂಜೆ 7ವರೆಗೆ ಸಂಗೀತ ಕಛೇರಿ ಹಮ್ಮಿಕೊಳ್ಳಲಾಗಿದೆ. ಸ್ಥಳೀಯ ಹಾಗೂ ರಾಜ್ಯ ಮತ್ತು ರಾಷ್ಟ್ರಮಟ್ಟದ ಕಲಾವಿದರೂ ಭಾಗವಹಿಸಿ ಕಾರ್ಯಕ್ರಮಗಳನ್ನು ನೀಡುತ್ತಿದ್ದಾರೆ ಎಂದು ವ್ಯವಸ್ಥಾಪಕ ಲಕ್ಷ್ಮೀನಾರಾಯಣ್ ತಿಳಿಸಿದರು. ಕಲಾವಿದರು ತಮ್ಮ ಪ್ರತಿಭೆಯನ್ನು ತೋರಿಸಲು ಇದೊಂದು ಉತ್ತಮ ವೇದಿಕೆಯಾಗಿದೆ ಎಂದು ಹೇಳಿದರು.