ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊಚ್ಚಗಾಯಿ ವಿಶೇಷ

Last Updated 3 ಜೂನ್ 2011, 19:30 IST
ಅಕ್ಷರ ಗಾತ್ರ

ಬಲಿತ ಮಾವಿನ ಕಾಯನ್ನು ಬೇಯಿಸಿ, ಅದಕ್ಕೆ ಉಪ್ಪು ಸೇರಿಸಿ ಜಾಡಿಯಲ್ಲೋ, ಪ್ಲಾಸ್ಟಿಕ್ ಕ್ಯಾನ್‌ನಲ್ಲೋ ಹಾಕಿಟ್ಟುಕೊಂಡರೆ ಅದನ್ನು ವರ್ಷವಿಡೀ ಅಡುಗೆಗೆ ಬಳಸಬಹುದು. ಹೀಗೆ ಬೇಯಿಸಿ ಉಪ್ಪಿನಲ್ಲಿ ಹಾಕಿದ ಮಾವಿನ ಕಾಯನ್ನು ಕೊಚ್ಚಗಾಯಿ ಎಂದು ಕರೆಯುತ್ತಾರೆ. ಇನ್ನೇನು ಮಳೆಗಾಲ ಶುರುವಾಗುತ್ತಿದೆ. ಕೊಚ್ಚಗಾಯಿ ಖಾರದ ಗೊಚ್ಚು, ಸಾಸಿವೆ, ಪಲ್ಯ, ತಂಬುಳಿ, ಮೊಸರು ಬಜ್ಜಿ ಇತ್ಯಾದಿ ಮಾಡಿಕೊಂಡು ಸವಿಯುವುದೇ ಒಂದು ಹಿತವಾದ ಅನುಭವ.

ಖಾರದ ಗೊಜ್ಜು :
ಬೇಕಾಗುವ ಸಾಮಗ್ರಿಗಳು: 5-6 ಕೊಚ್ಚಗಾಯಿ, ಖಾರಕ್ಕೆ  ತಕ್ಕ ಹಾಗೆ ಸಣ್ಣ ಮೆಣಸಿನಕಾಯಿ, ರುಚಿಗೆ ತಕ್ಕಷ್ಟು ಉಪ್ಪು, 6-7 ಬೆಳ್ಳುಳ್ಳಿ , 2 ಚಮಚ ಉದ್ದಿನಬೇಳೆ  2 ಚಮಚ ಸಾಸಿವೆ, ಚಿಟಿಕೆ ಅರಿಶಿಣ, ಎಣ್ಣೆ.

ಮಾಡುವ ವಿಧಾನ : ಕೊಚ್ಚಗಾಯನ್ನು ಉಪ್ಪು ನೀರಿನಿಂದ ತೆಗೆದು ತೊಳೆದು ಚೆನ್ನಾಗಿ ಕಿವುಚಿಟ್ಟುಕೊಳ್ಳಿ. ಒಗ್ಗರಣೆಗೆ ಸಣ್ಣ ಮೆಣಸಿನಕಾಯಿ ಹಾಗೂ ಬೆಳ್ಳುಳ್ಳಿಯನ್ನು ಜಜ್ಜಿ ಇಟ್ಟುಕೊಳ್ಳಬೇಕು. ಒಗ್ಗರಣೆಗೆ ಉದ್ದಿನಬೇಳೆ, ಜಜ್ಜಿಟ್ಟುಕೊಂಡ ಮೆಣಸು, ಬೆಳ್ಳುಳ್ಳಿ, ಅರಿಶಿಣ, ಸಾಸಿವೆ ಹಾಕಿದ ನಂತರ ಕಿವುಚಿಟ್ಟ ಕೊಚ್ಚಗಾಯಿ ರಸವನ್ನು ಹಾಕಿ ಸ್ವಲ್ಪ ಉಪ್ಪು ಹಾಕಿ ಚೆನ್ನಾಗಿ ಕುದಿಸಬೇಕು. ಇದನ್ನು ಬಿಸಿ ಬಿಸಿ ಅನ್ನಕ್ಕೆ ಕಲಸಿಕೊಂಡು ಊಟಮಾಡುವುದೇ ಒಂದು ಮಜ.

ಸಿಹಿಗೊಜ್ಜು :
ಬೇಕಾಗುವ ಸಾಮಗ್ರಿಗಳು : 5-6 ಕೊಚ್ಚಗಾಯಿ, ಬೆಲ್ಲ, ಮೆಣಸಿನಪುಡಿ 2-3 ಚಮಚ, ಉಪ್ಪು, ಉದ್ದಿನಬೇಳೆ ಹಾಗೂ ಹುರಿದ ಕಡ್ಲೆಬೇಳೆ ಪುಡಿ 2 ಚಮಚ , ಉದ್ದಿನಬೇಳೆ 1 ಚಮಚ, ಚಿಟಿಕೆ ಅರಿಶಿಣ, ಸಾಸಿವೆ 1 ಚಮಚ, ಎಣ್ಣೆ ಹಾಗೂ ಇಂಗು

ಮಾಡುವ ವಿಧಾನ : ಕೊಚ್ಚಗಾಯನ್ನು ಉಪ್ಪು ನೀರಿನಿಂದ ತೆಗೆದು ತೊಳೆದು  ಸಿಪ್ಪೆ ತೆಗೆದು ಕಿವುಚಿಟ್ಟುಕೊಳ್ಳಿ. ಒಗ್ಗರಣೆಗೆ ಎಣ್ಣೆ, ಉದ್ದಿನಬೇಳೆ, ಸಾಸಿವೆ, ಅರಿಶಿಣ, ಇಂಗು ಹಾಕಿ ನಂತರ ಅದಕ್ಕೆ ಕೊಚ್ಚಗಾಯಿ ರಸವನ್ನು ಹಾಕಿ. ಬಳಿಕ  ಬೆಲ್ಲ ಹಾಗೂ  ಉಪ್ಪು ಹಾಕಿ ಚೆನ್ನಾಗಿ ಕುದಿಸಬೇಕು.  ಕುದಿಯಬೇಕಾದರೆ ಮೆಣಸಿನ ಪುಡಿ, ಉದ್ದಿನಬೇಳೆ ಹಾಗೂ ಕಡ್ಲೆ ಬೇಳೆ ಪುಡಿ ಹಾಕಬೇಕು. ಇದು ಕೂಡ ಅನ್ನಕ್ಕೆ ಕಲಸಿಕೊಳ್ಳಲು ತುಂಬಾ ರುಚಿಯಾಗಿರುತ್ತದೆ.

ನೀರುಗೊಜ್ಜು :
ಬೇಕಾಗುವ ಸಾಮಗ್ರಿಗಳು: 2 ಕೊಚ್ಚಗಾಯಿ, ನೀರು, ಉಪ್ಪು, 1 ಹಸಿಮೆಣಸು, ಇಂಗು, 1 ಒಣಮೆಣಸು, ಎಣ್ಣೆ ಹಾಗೂ ಸಾಸಿವೆ. 

ಮಾಡುವ ವಿಧಾನ : ಕೊಚ್ಚಗಾಯನ್ನು ಕಿವುಚಿ ಅದಕ್ಕೆ ಸಾಕಷ್ಟು ನೀರು ಹಾಕಿ. ಇದಕ್ಕೆ  ಉಪ್ಪು ಹಾಕಿದ ನಂತರ ಹಸಿಮೆಣಸು ಜಜ್ಜಿ ಹಾಕಿ.  ಬಳಿಕ ಇಂಗು ಹಾಗೂ ಸಾಸಿವೆ ಹಾಕಿ ಒಗ್ಗರಣೆ ಕೊಡಿ. ಇದು ಕುಡಿಯಲು ತುಂಬ ರುಚಿ. 

ಮೊಸರುಬಜ್ಜಿ :
ಬೇಕಾಗುವ ಸಾಮಗ್ರಿಗಳು : 2 ಕೊಚ್ಚಗಾಯಿ, 1 ಬಟ್ಟಲು ಮೊಸರು, ಸ್ವಲ್ಪ ಬೆಲ್ಲ, ಸಾಸಿವೆ 1 ಚಮಚ, ಒಣಮೆಣಸು 2, ತುಪ್ಪ 1ಚಮಚ, ರುಚಿಗೆ ಉಪ್ಪು .

ಮಾಡುವ ವಿಧಾನ: ಕೊಚ್ಚಗಾಯನ್ನು ಕಿವುಚಿಟ್ಟುಕೊಂಡು ಅದಕ್ಕೆ ಮೊಸರು, ಬೆಲ್ಲ ಉಪ್ಪು ಹಾಕಿ ಕದಡಿ ನಂತರ ತುಪ್ಪಕ್ಕೆ ಒಣಮೆಣಸು ಹಾಗೂ ಸಾಸಿವೆ ಹಾಕಿ ಒಗ್ಗರಣೆ ಕೊಡಬೇಕು. ಬಿಸಿ ಬಿಸಿ ಅನ್ನಕ್ಕೆ ಇದನ್ನು ಕಲಸಿಕೊಂಡು ಊಟ ಮಾಡಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT